Thursday, August 12, 2010

ಲಾಲ್‌ಬಾಗ್ ಸುಂದರಿಯರು - ೨೦೧೦

ಕಳೆದ ವರ್ಷದ ಸ್ವಾತಂತ್ರೋತ್ಸವ ನಿಮಿತ್ತ ಲಾಲ್‌ಬಾಗ್ ಉದ್ಯಾನದಲ್ಲಿ ಏರ್ಪಡಿಸಿದ್ದ ಪುಷ್ಪಪ್ರದರ್ಶನದ ಚಿತ್ರಗಳನ್ನು ಲಾಲ್‌ಬಾಗ್ ಸುಂದರಿಯರು ಎಂಬ ಪೋಸ್ಟ್ ನಲ್ಲಿ ನೋಡಿದ್ದೀರಿ. ಇವು ಈ ವರ್ಷದ 'ಸುಂದರಿಯರು' ...



ಸಮಯದ ಅಭಾವದಿಂದ ಚಿತ್ರಗಳಿಗೆ ಶೀರ್ಷಿಕೆ/ಅಡಿಬರಹ ಬರೆಯಲಾಗಲಿಲ್ಲ. ಕ್ಷಮೆಯಿರಲಿ...

ಪ್ರೀತಿಯಿಂದ,

Monday, August 9, 2010

ಫಿಸಿಕ್ಸ್ ಮೇಷ್ಟ್ರೂ.. ಸ್ನೇಹಿತನೂ.. ಮತ್ತು ನಕಲಿ ಸಹಿಯೂ..

.
ಅದು ೨೦೦೧ ರ ಜುಲೈ - ಆಗಸ್ಟ್ ಸಮಯ ಇರಬೇಕು. ಆಗ ನಾನು ನನ್ನ ಬೀ. ಈ. ಎರಡನೇ ಸೆಮೆಸ್ಟರ್ ನಲ್ಲಿದ್ದೆ. ಎರಡನೆ ಸೆಮೆಸ್ಟರ್ ಗೆ ಫಿಸಿಕ್ಸ್ ಮತ್ತು ಮೆಕ್ಯಾನಿಕಲ್ ವರ್ಕ್‌ಶಾಪ್ ಇದ್ವು. ಫಿಸಿಕ್ಸ್ ಲ್ಯಾಬ್ ನಲ್ಲಿ ಒಂದು ಅಲಿಖಿತ ನಿಯಮ ಇತ್ತು. ಲ್ಯಾಬ್ ನಲ್ಲಿ ಪ್ರತಿ ವಾರದ ಪ್ರ್ಯಾಕ್ಟಿಕಲ್ ಕ್ಲಾಸ್ ನಂತರ ಎಲ್ಲರೂ ತಮ್ಮ ಅಬ್ಸರ್ವೇಶನ್ ಬುಕ್ ಅನ್ನು ಲ್ಯಾಬ್ ಫ್ಯಾಕಲ್ಟೀ ಗೆ ತೋರಿಸಿ ಅಂದಿನ ಎಕ್ಸ್‌ಪೆರಿಮೆಂಟ್ ನ ರೆಕಾರ್ಡ್ಸ್ ತೋರಿಸಿ ಅವರ ಸಹಿ ಪಡೆಯಬೇಕಿತ್ತು. ಕೆಲವು ಮೈಗಳ್ಳ ಹುಡುಗರು (ಕೆಲವು ಹುಡುಗಿಯರೂ ಸಹ!) ಲ್ಯಾಬ್ ನಲ್ಲಿ ಎಕ್ಸ್‌ಪೆರಿಮೆಂಟ್ ಮಾಡದೇ ಸುಮ್ನೇ ಟೈಮ್ ಪಾಸ್ ಮಾಡಿ, ಬೇರೆಯವರ ರೀಡಿಂಗ್ಸ್ ಕಾಪೀ ಮಾಡಿ ತೋರಿಸುತ್ತಿದ್ದುದರಿಂದ ನಮ್ಮ ಫಿಸಿಕ್ಸ್ ಮೇಷ್ಟ್ರು ಈ ನಿಯಮವನ್ನು ಜಾರಿಗೆ ತಂದಿದ್ದರು. ನಂತರ ನಾವು ಅಬ್ಸರ್ವೇಶನ್ ಬುಕ್ ನಲ್ಲಿನ ರೀಡಿಂಗ್ ಮತ್ತು ಫಲಿತಾಂಶಗಳನ್ನು ಜರ್ನಲ್ ನಲ್ಲಿ ಬರೆದು ಮೇಷ್ಟರಿಗೆ ತೋರಿಸಬೇಕಿತ್ತು. ಸೆಮೆಸ್ಟರ್ ನ ಕೊನೆಯಲ್ಲಿ ಜರ್ನಲ್ ಗೆ ಅಂತ 5% ಇಂಟರ್ನಲ್ ಮಾರ್ಕ್ಸ್ ಇರ್ತಿದ್ವು ಮತ್ತು ಆ ಇಂಟರ್ನಲ್ ಮಾರ್ಕ್ಸ್ ಫೈನಲ್ ರಿಸಲ್ಟ್ ನಲ್ಲಿ ಕನ್ಸಿಡರ್ ಆಗ್ತಿದ್ವು. ಅಬ್ಸರ್ವೇಶನ್ ಬುಕ್ ನಲ್ಲಿ ಸಹಿ ಪಡೆದ ಎಕ್ಸ್‌ಪೆರಿಮೆಂಟ್ ಗಳಿಗೆ ಮಾತ್ರ ಜರ್ನಲ್ ನಲ್ಲಿ ಸಹಿ ಮಾಡುತ್ತಿದ್ದರು ಮತ್ತು ಎಲ್ಲ ಎಕ್ಸ್‌ಪೆರಿಮೆಂಟ್ ಗಳನ್ನು ದಾಖಲಿಸಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಸಂಪೂರ್ಣ ಮಾರ್ಕ್ಸ್ ಲಭಿಸುತ್ತಿತ್ತು.
.

.
ಇಂಟರ್ನಲ್ ಮಾರ್ಕ್ಸ್ ಗಿಟ್ಟಿಸಲೋಸುಗ ಕೆಲವು ಹುಡುಗರು ಅಬ್ಸರ್ವೇಶನ್ ಬುಕ್ ನಲ್ಲಿ ಮೇಷ್ಟ್ರ ಸಹಿಯನ್ನು ನಕಲು ಮಾಡುತ್ತಿದ್ದುದುಂಟು. ಹೀಗೆ ನಕಲು ಮಾಡುತ್ತಿದ್ದುದು ಮೇಷ್ಟರಿಗೂ ಗೊತ್ತಿದ್ದ ಕಾರಣ ಅವರು ಸಹ ಅಬ್ಸರ್ವೇಶನ್ ಬುಕ್ ಅನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಮಾರ್ಕ್ಸ್ ಕೊಡುತ್ತಿದ್ದರು.
.
ಸರಿ, ಸೆಮೆಸ್ಟರ್ ಕೊನೆಯ ಸಮಯ ಬಂದೇ ಬಿಟ್ಟಿತು. ಪ್ರಿಲಿಮಿನರೀ ಪ್ರ್ಯಾಕ್ಟಿಕಲ್ ಎಗ್ಸ್ಯಾಮ್ಸ್ ಬಂತು. ಆ ಸಮಯದಲ್ಲೇ ಇಂಟರ್ನಲ್ ಮಾರ್ಕ್ಸ್ ಅವಾರ್ಡ್ ಮಾಡುತ್ತಿದ್ದರು. ನನ್ನ ಸೀರಿಯಲ್ ನಂಬರಿಗೆ ಮುಂಚೆ ನನ್ನ ಕ್ಲಾಸ್‌ಮೇಟ್ ಒಬ್ಬನ ನಂಬರ್ ಇತ್ತು. ಪ್ರಿಲಿಮಿನರೀ ಎಗ್ಸ್ಯಾಮ್ ದಿನ ಮೇಷ್ಟರು ನಮ್ಮನ್ನೆಲ್ಲಾ ಲ್ಯಾಬ್ ನಲ್ಲಿ ನಮ್ಮ ನಮ್ಮ ಸೀರಿಯಲ್ ನಂಬರ್ ಪ್ರಕಾರ ಕ್ಯೂ ನಲ್ಲಿ ಬರಲು ಹೇಳಿ ಒಬ್ಬೊಬ್ಬರದೇ ಜರ್ನಲ್ ಮತ್ತು ಅಬ್ಸರ್ವೇಶನ್ ಬುಕ್ ಪರಿಶೀಲಿಸಿ ಮಾರ್ಕ್ಸ್ ಕೊಟ್ಟು ಕಳುಹಿಸಲು ಶುರು ಮಾಡಿದರು. ನನಗಿಂತ ಮುಂಚೆ ನನ್ನ ಸ್ನೇಹಿತನ ನಂಬರ್ ಇದ್ದುದರಿಂದ ಅವನು ನನಗಿಂತ ಮುಂಚೆ ಮೇಷ್ಟ್ರ ಬಳಿಗೆ ಹೋದ. ನಾನು ಸರದಿಯಲ್ಲಿ ಅವನ ಹಿಂದೆಯೇ ನಿಂತಿದ್ದೆ. ಮೇಷ್ಟರು ಅವನ ಅಬ್ಸರ್ವೇಶನ್ ಬುಕ್ ನ ಪ್ರತಿ ಪೇಜ್ ಅನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಾ, ಒಂದೊಂದೇ ಪುಟವನ್ನು ತಿರುವಿ ಹಾಕುತ್ತಾ, ಮಧ್ಯೆ ಒಂದು ಪೇಜ್ ನಲ್ಲಿ ತುಂಬಾ ಹೊತ್ತು ಮುಳುಗಿ ಹೋದರು. ಆಮೇಲೆ ಕತ್ತೆತ್ತಿ, ನನ್ನ ಸ್ನೇಹಿತನನ್ನು ದುರುಗುಟ್ಟಿ ನೋಡುತ್ತಾ "ಏನೋ ಫೋರ್ಜರಿ ಮಾಡ್ತೀಯಾ? ಎಷ್ಟು ಧೈರ್ಯ ನಿನಗೇ? ಈ ಪೇಜ್ ನಲ್ಲಿರೋ ಸಹಿ ನನ್ನದಲ್ಲ!" ಅಂತ ಗದರಿ, ಅದರ ಮುಂದಿನ ಪೇಜ್ ತಿರುಗಿಸಿ ಅಲ್ಲಿದ್ದ ಸಹಿಯನ್ನು ತೋರಿಸುತ್ತಾ "ಇದು ನನ್ನ ಸಹಿ, ಹಿಂದಿನ ಪೇಜ್ ನಲ್ಲಿರೋದು ನೀನು ಮಾಡಿದ ನಕಲು ಸಹಿ!" ಅಂತ ಗದರಿ, ಒಂದು ಮಾರ್ಕ್ ಕಡಿಮೆ ಕೊಟ್ಟು ಕಳುಹಿಸಿದರು. ನನ್ನ ಸ್ನೇಹಿತ ತನ್ನ ಎಕ್ಸ್‌ಪೆರಿಮೆಂಟ್ ಮುಗಿಸಿ, ಜರ್ನಲ್ ಮತ್ತು ಅಬ್ಸರ್ವೇಶನ್ ಬುಕ್ ಪಡೆದು ಹೊರಗೆ ಹೋದ.
.
ನಂತರ ನನ್ನ ಸರದಿ. ನಾನು ಕಾಲೇಜಿನಲ್ಲಿ ತುಂಬಾ ಒಬೀಡಿಯೆಂಟ್ ಸ್ಟೂಡೆಂಟ್ (!) ಆಗಿದ್ದರಿಂದ ನನಗೆ ಜರ್ನಲ್ ಗೆ ಫುಲ್ಲ್ ಮಾರ್ಕ್ಸ್ ಸಿಕ್ಕ್ವು. ನಾನು ಸಹ ನನ್ನ ಪ್ರ್ಯಾಕ್ಟಿಕಲ್ ಪ್ರಿಲಿಮಿನರೀ ಎಗ್ಸ್ಯಾಮ್ ಮುಗಿಸಿ ಹೊರಗೆ ಬಂದೆ. ನನ್ನ ಸ್ನೇಹಿತ ನಕಲು ಸಹಿ ಮಾಡಿದ್ದು ಅದಕ್ಕೆ ಮುಂಚೆ ನನಗೂ ಸಹ ಗೊತ್ತಿರಲಿಲ್ಲವಾದ್ದರಿಂದ ಅವನನ್ನೇ ಕೇಳಿ ವಿಷಯ ತಿಳಿದು ಕೊಳ್ಳುವ ಕುತೂಹಲದಿಂದ ಅವನನ್ನೇ ಹುಡುಕಿಕೊಂಡು ಹೊರಟೆ. ಅಲ್ಲಿ ಗಿಡದ ಕೆಳಗೆ ನನಗೋಸ್ಕರ ಕಾಯುತ್ತಾ ಕುಳಿತಿದ್ದ ನನ್ನ ಸ್ನೇಹಿತನೆಡೆಗೆ ಹೋಗಿ ನಯವಾಗಿ ಗದರುತ್ತ ಕೇಳಿದೆ "ಯಾಕೋ ಆ ತರ ಮಾಡಿದೆ.. ಮೇಷ್ಟರ ಸಹಿಯನ್ನೇ ನಕಲು ಮಾಡುವ ಧೈರ್ಯ ಹೇಗೋ ಬಂತು ನಿಂಗೆ? ಈಗ ನೋಡು ಒಂದು ಮಾರ್ಕ್ಸ್ ಕಡಿಮೆ ಬಂತಲ್ಲ ನಿಂಗೆ.." ಅಂತ ಗದರಿದೆ.
ಅದಕ್ಕವನು ನಗುತ್ತಾ ಏನು ಹೇಳಿದ ಗೊತ್ತಾ?

.

"ಲೋ, ಮಾರ್ಕ್ಸ್ ಕಥೆ ಬಿಟ್ಟ್ಹಾಕು; ತಮಾಷೆ ಏನು ಗೊತ್ತಾ!? ಮೇಷ್ಟ್ರು ಮೊದಲು 'ಈ ಸಹಿ ನನ್ನದಲ್ಲ' ಅಂದ್ರಲ್ಲ.. ಅದು ಅವರದೇ ಸಹಿ!.... ಅವರು ನಂತರದ ಪೇಜ್ ತೋರಿಸಿ 'ಇದು ನನ್ನ ಸಹಿ' ಅಂದ್ರಲ್ಲ.. ಅದು ನಾನು ಮಾಡಿದ ನಕಲು ಸಹಿ!!"

.

ನನಗೆ ನಗು ತಡೆಯಲಾರದೇ ಬಿದ್ದು ಬಿದ್ದು ನಕ್ಕಿದ್ದೆ.. ಈಗಲೂ ಗೆಳೆಯರೆಲ್ಲ ಸೇರಿದಾಗ ಆ ಘಟನೆಯನ್ನು ನೆನೆಸಿಕೊಂಡು ನಗುತ್ತಿರುತ್ತೇವೆ.

Thursday, October 15, 2009

ಹೊಣೆಗಾರಿಕೆ

ಮೊನ್ನೆ ಹೀಗೇ ನನ್ನ ಪರ್ಸನಲ್ ಮೇಲ್ ಬಾಕ್ಸ್ ನಲ್ಲಿ ಏನೋ ಹುಡುಕುತ್ತಿದ್ದಾಗ ನನಗೆ ಸ್ನೇಹಿತರೊಬ್ಬರು ತುಂಬಾ ಹಿಂದೆ ಕಳಿಸಿದ್ದ ಈ-ಮೇಲ್ ಒಂದು ಕಣ್ಣಿಗೆ ಬಿತ್ತು. ಪರಮಹಂಸ ಶ್ರೀ ನಿತ್ಯಾನಂದ ಎಂಬ ಮಹನೀಯರೊಬ್ಬರು ಬರೆದ ಒಂದು ಚಿಕ್ಕ ಲೇಖನ ಅದರಲ್ಲಿತ್ತು. ಅದು ಜುಲೈ 13, 2006 ರ ಎಕನಾಮಿಕ್ ಟೈಮ್ಸ್ ನ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟವಾಗಿತ್ತಂತೆ. ಒಬ್ಬ ವ್ಯಕ್ತಿ ಜೀವನದ ಯಾವುದೇ ರಂಗದಲ್ಲಿ ಬೆಳೆಯಲು ಮೂಲಭೂತವಾದ ಮತ್ತು ಅತಿ ಅಗತ್ಯವಾದ ಅಂಶಗಳಲ್ಲಿ ನಾವು ಮಾಡುವ ಪ್ರತಿ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ನಾವೇ ಹೊರುವುದು ಎಷ್ಟು ಮುಖ್ಯ ಎಂದು ಅದರಲ್ಲಿ ಅವರು ತುಂಬಾ ಚೆನ್ನಾಗಿ ವಿವರಿಸಿದ್ದರು. ಅದರಲ್ಲಿನ ಕೆಲವು ಅಣಿಮುತ್ತುಗಳು, ಇಲ್ಲಿ ನಿಮ್ಮೆಲ್ಲರಿಗಾಗಿ:

1) Responsibility is consciousness.

2) When you work with no feelings of responsibility, you will work and feel like a slave. When you work with responsibility, your capacity will expand and you will flower and radiate energy.

3) When you take up responsibility for the entire cosmos, you will expand and look like a leader!

ಹೌದಲ್ವಾ! ದಿನ ನಿತ್ಯ ನಾವು ಎಷ್ಟೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಮನೆಯಲ್ಲಾಗಲಿ, ಕೆಲಸದ ಮೇಲಿರಲಿ, ನಮ್ಮನ್ನು ನಂಬಿ ನಮ್ಮ ಮೇಲೆ ಒಂದಿಲ್ಲೊಂದು ಕೆಲಸವನ್ನು ವಹಿಸಿರುತ್ತಾರೆ. ಆ ಕೆಲಸವನ್ನು ನಾವು ಮಾಡಿ ಮುಗಿಸುವುದಷ್ಟೇ ಮುಖ್ಯವಲ್ಲ; ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಕೆಲಸ ಮುಗಿಸಿ ಕೈ ತೊಳೆದುಕೊಳ್ಳಲಾಗುವುದಿಲ್ಲ. ನಂತರದ ಎಲ್ಲ ಪರಿಣಾಮಗಳಿಗೂ ನಾವೇ ಹೊಣೆಗಾರರಾಗಿರಬೇಕಾಗುತ್ತದೆ. ಈ ಹೊಣೆಗಾರಿಕೆಯನ್ನೇ ನಾವು ಅಕೌಂಟಬಿಲಿಟೀ, ಉತ್ತರದಾಯಿತ್ವ ಅನ್ನೋದು. ಶ್ರೀ ನಿತ್ಯಾನಂದರು ಹೇಳಿದಂತೆ, ಜವಾಬ್ದಾರಿ ಇಲ್ಲದೇ ಕೆಲಸ ಮಾಡಿದರೆ ನಾವು ಗುಲಾಮರಂತಾಗುತ್ತೇವೆ. ಅದೇ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಉಳಿದವರಿಗೆ ಮಾದರಿಯಾಗುವ ನಾಯಕರಾಗುತ್ತೇವೆ.


ಜೀವನದಲ್ಲಿ ಬೆಳೆಯಬೇಕೆಂದರೆ ಸ್ವಲ್ಪ ಮಟ್ಟಿಗಿನ ಕ್ಯಾಲ್ಕ್ಯುಲೇಟೆಡ್ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ. ನಮ್ಮ ಸ್ವಯಂ ಶಕ್ತಿಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದ್ದರೆ ಮಾತ್ರ ಆ ತರಹದ ರಿಸ್ಕ್ ತೆಗೆದುಕೊಳ್ಳಲು ಸಾಧ್ಯ. ಆದರೆ ಯಾವುದೇ ರಿಸ್ಕ್ ತೆಗೆದುಕೊಳ್ಳದೇ, ಯಾವುದೇ ಕೆಲಸದ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಳ್ಳದೇ ಕೆಲಸ ಮಾಡುವುದು ಗುಲಾಮಗಿರಿಯಲ್ಲದೇ ಬೇರೇನಲ್ಲ. ನಾವು ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು, ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅದನ್ನು ಸಮರ್ಪಕವಾಗಿ ಮಾಡಿ ಮುಗಿಸಿದಾಗ ಅದರಿಂದ ಒಳ್ಳೆಯದೇ ಆಗಬಹುದು, ಅಥವಾ ಕೆಟ್ಟದ್ದೂ ಆಗಬಹುದು. ಒಳ್ಳೆಯದಾದ್ರೆ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರಲು ಸ್ಪೂರ್ತಿ ಸಿಗುತ್ತದೆ ಮತ್ತು ನಮ್ಮ ಆತ್ಮ ವಿಶ್ವಾಸ (ಸೆಲ್ಫ್ ಕಾನ್ಫಿಡೆನ್ಸ್) ಹೆಚ್ಚುತ್ತದೆ. ಒಂದು ವೇಳೆ ಕೆಲಸದ ಪರಿಣಾಮ ಅನಿರೀಕ್ಷಿತವಾಗಿ ಕೆಟ್ಟದ್ದಾದರೆ ನಾವು ಒಂದು ಹೊಸ ಪಾಠ ಕಲಿತಂತಾಗುತ್ತದೆ. ಮುಂದಿನ ಸಲ ಯಾವುದೇ ಕೆಲಸ ಮಾಡುವಾಗ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ. ಹೊಣೆಗಾರಿಕೆಯೇ ಇಲ್ಲದೇ ಕೆಲಸ ಮಾಡಿದಾಗ 'ಕೆಲಸ ಮಾಡಿ ಪ್ರತಿಫಲ ಪಡೆದೆ' ಅನ್ನುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನದೇನನ್ನೂ ಸಾಧಿಸಲಾಗುವುದಿಲ್ಲ. ಕಡೇತನಕ ಬೇರೆಯವರು ಹೇಳುವ ಕೆಲಸವನ್ನೇ ಮಾಡುತ್ತಾ "ನೀ ಹೇಳಿದೆ, ಅದಕ್ಕೆ ನಾ ಮಾಡಿದೆ" ಎಂಬ ಉಡಾಫೆ ಪ್ರವೃತ್ತಿ ಮೈಗೂಡುತ್ತದೆ.

ಜವಾಬ್ದಾರಿ ಬಂದಾಗ ನಿಭಾಯಿಸುವುದು ಬೇರೆ, ನಾವೇ ಜವಾಬ್ದಾರಿ ಹೊರಲು ಮುಂದಾಗುವುದು ಬೇರೆ. ಜೀವನದಲ್ಲಿ ಎಲ್ಲವೂ ತಾನೇ ತಾನಾಗಿ ಬರುವುದಿಲ್ಲ. ಜವಾಬ್ದಾರಿ ಹೊರಲು ಸಿದ್ಧನಿರದವನು ಅದು ತಾನಾಗೇ ಬಂದಾಗಲೂ ಒಂದಿಲ್ಲೊಂದು ಕಾರಣ ಹೇಳಿ ಅದರಿಂದ ನುಣುಚಿಕೊಳ್ಳಲು ಪ್ರಯತ್ನಿಸ್ತಾನೆ. ಹಾಗಾದಾಗ, ಆ ವ್ಯಕ್ತಿಯ ಜೀವನ ನಿಂತ ನೀರಾಗುತ್ತದೆ. ಹಳೆಯ ಸೋಲನ್ನೆಲ್ಲ ಮರೆತು, ಸಾಧ್ಯವಾದರೆ ಅವುಗಳಿಂದ ಸ್ವಲ್ಪ ಪಾಠವನ್ನೂ ಕಲಿತು, ಮೈಗೊಡವಿ ಎದ್ದು ಹೊಸ ಜವಾಬ್ದಾರಿಯನ್ನು ಹೊರಲು ಸಿದ್ಧನಾಗುವವನಿಗೆ ಒಂದಿಲ್ಲೊಂದು ಅವಕಾಶ ಹುಡುಕಿಕೊಂಡು ಬರುತ್ತದೆ. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ತುಂಬಾ ಅಗತ್ಯ ಕೂಡ.

ಮನೆಯಲ್ಲಾಗಲೀ, ಕಚೇರಿಯಲ್ಲಾಗಲಿ - ನಾವು ಮಾಡುವ ಕೆಲಸದ ಸಂಪೂರ್ಣ ಜವಾಬ್ದಾರಿ ಹೊರಲು ಸಿದ್ಧರಾದಾಗಲೇ ನಮ್ಮ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಹೊಣೆಗಾರಿಕೆಯಿಂದ ಮಾಡುವ ಒಂದು ಪುಟ್ಟ ಕೆಲಸವು ನೀಡುವ ತೃಪ್ತಿ, ಆತ್ಮ ಸಂತೋಷವನ್ನು ಹೊಣೆಗಾರಿಕೆಯಿಲ್ಲದೇ ಮಾಡುವ ಎಷ್ಟೇ ದೊಡ್ಡ ಮತ್ತು ಎಷ್ಟೇ ದುಡ್ಡು ತಂದು ಕೊಡುವ ಯಾವ ಗುಲಾಮಗಿರಿ ಕೆಲಸವೂ ಕೊಡಲ್ಲ, ಅಲ್ವಾ?

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು


ತಮಗೆ ಮತ್ತು ತಮ್ಮ ಕುಟುಂಬವರ್ಗದವರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಗಳ ಹಬ್ಬ ನಮ್ಮೆಲ್ಲರ ಬಾಳಿನಲ್ಲಿ ಇಂತಹ ಅನಂತ ದಿವ್ಯಜ್ಞಾನದ ಜ್ಯೋತಿಗಳನ್ನು ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ.

Tuesday, September 1, 2009

ಕಟು ಸತ್ಯ

'
ನನ್ನ ಮೊಟ್ಟಮೊದಲ ಬ್ಲಾಗ್ ಪೋಸ್ಟ್ ನಲ್ಲಿ ತಮಿಳರ ಭಾಷಾ ದುರಭಿಮಾನ ಮತ್ತು ಬೆಂಗಳೂರಿನ ಬಗ್ಗೆ ಬರೆದಿದ್ದೆ. ಬೆಂಗಳೂರಿನಲ್ಲಿ ತಮಿಳರ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ಸ್ವಂತ ಅನುಭವವೊಂದನ್ನು ಆಧಾರವಾಗಿಟ್ಟುಕೊಂಡು ಆ ಪುಟ್ಟ ಲೇಖನದಲ್ಲಿ ಹೇಳಿದ್ದೆ. ಆ ಕಟು ಸತ್ಯವನ್ನು ಪುಷ್ಟೀಕರಿಸುವಂತಹ ಈ-ಮೈಲ್ ಫಾರ್ವರ್ಡ್ ಒಂದು ನಿನ್ನೆ ಸ್ನೇಹಿತನೊಬ್ಬನಿಂದ ಬಂತು.

ಬೆಂಗಳೂರಿನಲ್ಲಿ ಕನ್ನಡಕ್ಕೆ ಒದಗಿರುವ ದುಸ್ಥಿತಿಯನ್ನು ಬಿಂಬಿಸುವ ಈ ಚಿತ್ರವನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

'ಈ ಕಾರ್ಟೂನ್ ಚಿತ್ರಿಸಿದ ರಾಮಧ್ಯಾನಿ ಅವರಿಗೆ ಧನ್ಯವಾದಗಳು.

Tuesday, August 25, 2009

ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಬಿಡಬೇಕೆನಿಸುತ್ತಿದೆಯಾ?

ಕೆಲವು ಸಲ ಹಾಗನ್ನಿಸುವುದು ಸಹಜ.

ಮತ್ತೊಬ್ಬರು ನಮ್ಮ ಸಹನೆ ಪರೀಕ್ಷಿಸುವ ಮಟ್ಟಿಗೆ ನಮ್ಮ ಮೇಲೆ ಕೆಸರೆರಚಾಟ ಮಾಡುವದು, ನಮ್ಮ ಚಾರಿತ್ರ್ಯವಧೆಗೆ ಕೈ ಹಾಕುವುದು, ತೀರಾ ಅಪರಿಚಿತರೂ ಸಹ ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು,... ಆಗೆಲ್ಲ, "ಛೇ! ಇಂಥವರೆಲ್ಲ ಇರುವ ಪರಿಸರದ ಸಹವಾಸವೇ ಬೇಡಪ್ಪಾ" ಅಂತಾ ಮೇಲೆದ್ದುಬಿಡಲು ಸಿದ್ಧರಾಗುತ್ತೇವೆ. ಆದರೆ, ಎಲ್ಲಿ ಹೋದರೂ ಅಂಥ ಜನರಿಂದ ತಪ್ಪಿಸಿಕೊಳ್ಳೋಕಾಗಲ್ಲ. ಜೀವನದಲ್ಲಿ ಸುಖ-ದುಖಃ, ಸಿಹಿ-ಕಹಿ, ಬೆಳಕು-ಕತ್ತಲು ಮುಂತಾದವುಗಳೆಲ್ಲ ಎಷ್ಟರಮಟ್ಟಿಗಿನ ಸಾರ್ವಕಾಲಿಕ ಸತ್ಯಗಳೋ, ಜಗತ್ತಿನಲ್ಲಿ ಒಳ್ಳೆಯವರು-ಕೆಟ್ಟವರು ಎರಡೂ ಥರದ ಜನ ಇರ್ತಾರೆ ಅನ್ನೋದೂ ಸಹ ಅಷ್ಟೇ ಸಾರ್ವಕಾಲಿಕ ಸತ್ಯ. ಇಲ್ಲಿರುವ ಕೆಟ್ಟ ಜನರಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದರೆ ಅಲ್ಲಿ ಇನ್ನೊಂದು ಥರದ ಕೆಟ್ಟ ಜನ ಸಿಗ್ತಾರೆ. ಕೆಟ್ಟದು ಇದ್ದಲ್ಲಿಯೇ ಒಳ್ಳೆಯತನದ ಅನುಭೂತಿ ಆಗಲು ಸಾಧ್ಯ, ಅಲ್ಲವೇ? ಎಲ್ಲ ಕಡೆ ಕೆಟ್ಟ ಜನ ಇದ್ದಾರೆ ಅಂತ ಜಗತ್ತನ್ನೇ ತೊರೆದು ಹೋಗುವುದು ಸಾಧ್ಯವೇ?

ಇಷ್ಟೆಲ್ಲಾ ಹೇಳಬೇಕೆಂದು ಅನಿಸಿದ್ದು, ತೀರ ಇತ್ತೀಚೆಗೆ ಬ್ಲಾಗುಲೋಕದಲ್ಲಿ ಆಗುತ್ತಿರುವ ಕೆಲವು ಕೆಟ್ಟ ಬೆಳವಣಿಗೆಗಳಿಂದ ಬೇಸತ್ತು ಕೆಲವು ಜನ ಬ್ಲಾಗುಲೋಕದ ಮಹನೀಯರು ಮತ್ತು ಪ್ರತಿಭಾವಂತ ಸಹೃದಯೀ ಬ್ಲಾಗುಮಿತ್ರರು ಬ್ಲಾಗಿಂಗ್ ಮಾಡುವುದನ್ನೇ ನಿಲ್ಲಿಸುತ್ತಿರುವದನ್ನು ಕಂಡಾಗ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಬ್ಲಾಗುಲೋಕದಲ್ಲೂ ಸಹ ವೈಯಕ್ತಿಕ ದ್ವೇಷ ಸಾಧಿಸುವವರು, ಮತ್ತೊಬ್ಬರಿಗೆ ವಿನಾಃಕಾರಣ ತೊಂದರೆ ಕೊಟ್ಟು ಸಂತಸಪಡುವ ಸ್ಯಾಡಿಸ್ಟ್ ಗಳು, ಮತ್ತೊಬ್ಬರ ಏಳ್ಗೆ ಸಹಿಸಲಾಗದೆ ಕಾಲೆಳೆಯುವ ಮತ್ಸರವಾದಿಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲೂ ಅಂತರ್ಜಾಲದಲ್ಲಿ ಇರುವ ಕೆಲವು ನ್ಯೂನತೆಗಳಿಂದಾಗಿ ಅಂಥವರನ್ನು ದೂರವಿರಿಸುವುದು ತುಂಬಾ ಕಷ್ಟದ ಕೆಲಸ. ಅಂಥವರನ್ನು ಗುರುತಿಸಿ, ಶಿಕ್ಷಿಸುವುದು ಇನ್ನೂ ಕಷ್ಟದ ಕೆಲಸ.

ಹೇಳಿ-ಕೇಳಿ ಅಂತರ್ಜಾಲ ಎಂಬುದು ಎಲ್ಲರಿಗೂ, ಹೆಚ್ಚು ಕಡಿಮೆ ಎಲ್ಲ ರೀತಿಯಿಂದಲೂ ಮುಕ್ತವಾಗಿರುವ ಸ್ಥಾನ. ಅಲ್ಲಿ ನಿರ್ಬಂಧನೆಗಳನ್ನು ಹಾಕುವುದು ಮತ್ತು ಅವುಗಳ ಪಾಲನೆಯಾಗುತ್ತಿದೆಯೇ ಎಂದು ಹದ್ದಿನಕಣ್ಣು ಇಟ್ಟು ಕಾಯುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಉಳಿದೆಲ್ಲ ಕಡೆಗಿಂತ ಇಲ್ಲಿ ವಿಶೇಷವಾಗಿ ಸಾಕ್ಷರ-ದುರ್ಜನರ ಕಾಟ ಸ್ವಲ್ಪ ಜಾಸ್ತೀನೇ ಅನ್ನಬಹುದು. ಹಾಗಂತ ಬ್ಲಾಗಿನಲ್ಲಿ ಬರೆಯುವುದನ್ನೇ ನಿಲ್ಲಿಸಿದರೆ ಹೇಗೆ? "ರೋಡ್ ರೇಜ್ ಜಾಸ್ತಿ, ಅದ್ಕೋಸ್ಕರ ಇನ್ಮುಂದೆ ನಾನು ರಸ್ತೆಯಲ್ಲಿ ಗಾಡಿ ಓಡಿಸಲ್ಲ" ಅನ್ನೋಕಾಗುತ್ತಾ? ಮನೆ ಸುತ್ತ ನಾಯಿಗಳ ಕಾಟ ಜಾಸ್ತಿ ಅಂತ ಮನೆಗೆ ಹೋಗದೇ ಇರೋಕಾಗುತ್ತಾ? ಯಾವುದೋ ಒಂದು ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೋಲ್ಲ, ಅಲ್ವಾ? ಹೀಗೆ, ಕೆಟ್ಟ ಜನ ಬ್ಲಾಗುಲೋಕದಲ್ಲಿ ಜಾಸ್ತಿ ಅಂತ ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಪಲಾಯನವಾದಿಗಳಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನನಗಂತೂ ಗೊತ್ತಾಗುತ್ತಿಲ್ಲ.

ಬ್ಲಾಗಲ್ಲಿ ಬರೆಯೋದು ಬಿಟ್ಟು, ಪುಸ್ತಕದಲ್ಲಿ ಬರೀತೀರಾ? ಪತ್ರಿಕೆಯಲ್ಲಿ ಬರೀತೀರಾ? ಅಲ್ಲಿ ಕಾಲೆಳೆಯುವವರು, ಅವಹೇಳನ ಮಾಡುವವರು, ಅನಾವಶ್ಯಕ ತೊಂದರೆ ಕೊಡುವವರು ಇಲ್ಲವೇ? ಹೀಗೆ ಬರೆಯುವುದನ್ನೇ ನಿಲ್ಲಿಸುವ ಬದಲು, ಸಾಧ್ಯವಾದಷ್ಟು ಗಟ್ಟಿಯಾಗಿ ನಮ್ಮ ಸುತ್ತ ನಾವೇ ಒಂದು ರಕ್ಷಣಾ ಗೋಡೆ ನಿರ್ಮಿಸಿಕೊಂಡು ಬರೆಯುವುದು ಒಳಿತಲ್ಲವೇ? ನಾನು ಬ್ಲಾಗು ಲೋಕಕ್ಕೆ ಕಾಲಿಟ್ಟಿದ್ದು ಸಹ ಕೆಲವು ಬ್ಲಾಗುಗಳ ಬರಹಗಳಿಂದ ಮತ್ತು ಅವುಗಳಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿಯೇ. ನಾವು ಬರೆಯುವುದು ಕೇವಲ ನಮ್ಮ ಆತ್ಮಸಂತೋಷಕ್ಕಾಗಿ ಮಾತ್ರ ಎಂದು ನಮ್ಮಷ್ಟಕ್ಕೆ ನಾವು ಹೇಳಿಕೊಂಡರೂ, ನಮ್ಮ ಬರಹ ಅದನ್ನು ಓದುವ ಎಷ್ಟೋ ಜನರ ಮೇಲೆ ಗಾಢ ಪರಿಣಾಮ ಬೀರಿ ಅವರಲ್ಲೂ ಬರೆಯುವ ಉತ್ಸಾಹವನ್ನು ತಂದು, ಅವರ ಜೀವನದಲ್ಲೂ ಒಂದು ಚಿಕ್ಕ ಬದಲಾವಣೆಯನ್ನು ಉಂಟು ಮಾಡಬಲ್ಲುದು ಅನ್ನೋದನ್ನ ನಾವು ಮರೆಯಬಾರದು, ಅಲ್ಲವೇ?

ದಿನದಿಂದ ದಿನಕ್ಕೆ ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ನಂತಹ ಬ್ಲಾಗ್ ಹೋಸ್ಟ್ ಗಳು ಬ್ಲಾಗಿನಲ್ಲಿ ಹೆಚ್ಚು ಹೆಚ್ಚು ಪ್ರೈವಸೀ ಅಳವಡಿಸುವ ಕೆಲಸ ಮಾಡುತ್ತಿವೆ. ಅವುಗಳನ್ನು ಉಪಯೋಗಿಸಿಕೊಳ್ಳೋಣ. ಉದಾಹರಣೆಗೆ, ಅನಾಮಧೇಯ (ಅನಾನಿಮಸ್) ಕಮೆಂಟುಗಳನ್ನು ಬರೆಯುವುದನ್ನು ನಿರ್ಬಂಧಿಸುವುದು. ಈ ಸೌಲಭ್ಯವಂತೂ ತುಂಬಾ ಹಿಂದಿನಿಂದ ಇದೆ. ಸದ್ಯಕ್ಕೆ ಬ್ಲಾಗುಲೋಕದ ಬಗ್ಗೆ ಇರುವ ಅತಿದೊಡ್ಡ ದೂರು ಅಂದ್ರೆ ಈ ಅನಾಮಧೇಯ ಕಮೆಂಟುಗಳದ್ದು. ನಾನು ನೋಡಿರುವಂತೆ, ಬೇಜವಾಬ್ದಾರಿಯ ಕಮೆಂಟುಗಳನ್ನು ಬರೆಯುವವರು ತುಂಬಾ ಸೋಂಬೇರಿಗಳಾಗಿರುತ್ತಾರೆ. ಅವರಿಗೆ ಒಂದು ಬ್ಲಾಗರ್ ಅಕೌಂಟ್ ಓಪನ್ ಮಾಡಿ ಅದರಿಂದ ಕಮೆಂಟ್ ಮಾಡುವುದೂ ಸಹ ಕಷ್ಟದ ಕೆಲಸ. ಅದಕ್ಕೇ ಅವರು ಅನಾಮಧೇಯ ಕಮೆಂಟುಗಳನ್ನು ಬರೆಯುವುದು. ಅನಾಮಧೇಯ ಕಮೆಂಟುಗಳನ್ನು ನಿರ್ಬಂಧಿಸುವುದರಿಂದ ಅಂಥವರನ್ನು ಸ್ವಲ್ಪಮಟ್ಟಿಗೆ ದೂರ ಇಡಬಹುದು. ಒಂದು ವೇಳೆ ಅವರೊಂದು ಅಕೌಂಟ್ ಓಪನ್ ಮಾಡಿ ಅದರಿಂದ ನಿಂದನಾತ್ಮಕ ಕಮೆಂಟುಗಳನ್ನು ಹಾಕಿದರೆ ಅಂಥವರ ಅಕೌಂಟನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಬಹುದು. ಕಮೆಂಟುಗಳನ್ನು ಮಾಡರೇಟ್ ಮಾಡಿದ ಮೇಲೆ ಬ್ಲಾಗಿನಲ್ಲಿ ಗೋಚರಿಸಲು (ಪಬ್ಲಿಶ್ ಮಾಡಲು) ಬಿಡುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ನಿಂದನಾತ್ಮಕ ಕಮೆಂಟುಗಳನ್ನು ಕನಿಷ್ಟ ಪಕ್ಷ ಮೊದಲ ಹಂತದಲ್ಲೇ ಚಿವುಟಿ ಹಾಕಿದಂತಾಗುತ್ತದೆ.
ಅದೃಷ್ಟವಶಾತ್ ನನ್ನ ಬ್ಲಾಗಿನಲ್ಲಿ ಇದುವರೆಗೂ ಯಾರೂ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಅದ್ಕೋಸ್ಕರ ನಾನು ನನ್ನ ಬ್ಲಾಗಿನಲ್ಲಿ ಬರುವ ಕಮೆಂಟುಗಳನ್ನು ಮಾಡರೇಟ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ಮುಂದೆ ಕಮೆಂಟ್ಸ್ ಮಾಡರೇಟ್ ಮಾಡಿಯೇ ಪಬ್ಲಿಶ್ ಮಾಡ್ತೀನಿ.

ನಿಮ್ಮ ಬ್ಲಾಗಿನಲ್ಲೇನಾದರೂ ನಿಂದನಾತ್ಮಕ ಕಮೆಂಟುಗಳ ಹಾವಳಿಯಿದ್ದರೆ ಈ ಮೊದಲು ಹೇಳಿದ ಎರಡೂ ವಿಧಾನಗಳನ್ನು ಅನುಸರಿಸಿ ನೋಡಿ. ಕೀಳು ಅಭಿರುಚಿಯ ಕಮೆಂಟುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗೆ ನಿಯಂತ್ರಿಸುವುದಂತೂ ಖಂಡಿತಾ ಸಾಧ್ಯ. ಅನವಶ್ಯಕ, ನಿಂದನಾತ್ಮಕ ಕಮೆಂಟುಗಳು ಹುಟ್ಟದಂತೆ ನೋಡಿಕೊಳ್ಳುವುದು ಸ್ವಲ್ಪಮಟ್ಟಿಗೆ ಬ್ಲಾಗಿಗರ ಕೈಯಲ್ಲೇ ಇದೆ. ಯಾವುದೇ ವಿಷಯದ ಬಗ್ಗೆ ಬ್ಲಾಗಿನಲ್ಲಿ ಬರೆಯುವ ಮುಂಚೆ, ನಮ್ಮ ಬರಹ ಯಾರ ಮನಸ್ಸಿಗಾದರೂ ನೋವು ಉಂಟು ಮಾಡಬಲ್ಲುದೇ ಎಂದು ಒಂದ್ಸಲ ಆಲೋಚಿಸುವುದೊಳಿತು. ಮತ್ತೊಬ್ಬರ ಭಾವನೆಗಳನ್ನು ಕೆರಳಿಸುವ, ಮತ್ತೊಬ್ಬರನ್ನು ಅವಹೇಳನ ಮಾಡಿ ನಗಿಸುವ ಬರಹಗಳನ್ನು ಬರೆಯುವುದೂ ತಪ್ಪಲ್ಲವೇ? ಬ್ಲಾಗಿನಲ್ಲಿ ವೈಯಕ್ತಿಕ ವಿಚಾರಗಳನ್ನು ಸಾಧ್ಯವಾದಷ್ಟು ಕಡಿಮೆ ಹಂಚಿಕೊಳ್ಳಿ. ಇದರಿಂದ ಮತ್ತೊಬ್ಬರು ಅನಾವಶ್ಯಕವಾಗಿ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಕಮೆಂಟ್ ಮಾಡುವುದನ್ನು ತಡೆಯಬಹುದು. ಹೀಗೆ ಕೆಲವು ನಮ್ಮದೇ ಆದ ಮತ್ತು ಕೆಲವು ಬ್ಲಾಗಿಂಗ್ ಸೈಟುಗಳು ನೀಡುವ ಅಸ್ತ್ರಗಳನ್ನು ಬಳಸಿಕೊಂಡು ಸಾಧ್ಯವಾದ ಮಟ್ಟಿಗೆ ಬ್ಲಾಗುಲೋಕದಲ್ಲಿನ ದುಷ್ಟರ ನಿಯಂತ್ರಣ ಮಾಡಬಹುದು ಅಂತ ನನ್ನ ಅನಿಸಿಕೆ.

ಅದೆಲ್ಲ ಬಿಟ್ಟು, "ನನ್ನ ಬರಹದ ಬಗ್ಗೆ ಯಾರೋ ಅನಾಮಧೇಯರು ನಿಂದನಾತ್ಮಕವಾಗಿ ಕಮೆಂಟು ಬರೆದಿದ್ದಾರೆ" ಅಂತ ಬರೆಯುವುದನ್ನೇ ನಿಲ್ಲಿಸುವುದು ನಮ್ಮ ಸ್ವಂತಿಕೆಗೆ ಮತ್ತು ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ, ಅಲ್ಲವೇ?

ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ಸ್ವಾಗತ.

ಚಿತ್ರಕೃಪೆ: ಅಂತರ್ಜಾಲ

ನನಗೇ ಗೊತ್ತಿರಲಿಲ್ಲ! ಈ ಲೇಖನವನ್ನು "ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ" ಎಂಬ ತಲೆಬರಹದಡಿಯಲ್ಲಿ ಮೇ ಫ್ಲವರ್ ಮೀಡೀಯ ಹೌಸ್ ನವರು 'ಅವಧಿ' ಬ್ಲಾಗಿನ 'ಬ್ಲಾಗ್ ಮಂಡಲ' ಎಂಬ ವಿಭಾಗದಲ್ಲಿ ಪರಿಚಯಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಜ ಹೇಳಬೇಕೆಂದರೆ, ನನ್ನ ಈ ಲೇಖನಕ್ಕೆ ಸ್ಪೂರ್ತಿಯಾಗಿದ್ದೇ 'ಅವಧಿ' ಬ್ಲಾಗಿನ 'ಜೋಗಿ'ಗೆ ಬುದ್ದಿ ಹೇಳಿ ಎಂಬ ಲೇಖನ. ಜೋಗಿ (ಗಿರೀಶ್ ರಾವ್) ರವರ ಬರಹಗಳನ್ನು ತುಂಬಾ ಇಷ್ಟಪಟ್ಟು ಓದುವವರಲ್ಲಿ ನಾನೂ ಒಬ್ಬ. ಅವರು ಬ್ಲಾಗು ಮುಚ್ಚಿದ ಸಂಗತಿ ನನಗೆ ನೋವಿನ ವಿಷಯವಾಗಿ ಕಾಡಿದ್ದು ನಿಜ. ಈ ಅನವಶ್ಯಕ, ನಿಂದನಾತ್ಮಕ ಕಮೆಂಟುಗಳ ಹಾವಳಿ ನಿಯಂತ್ರಿಸಲು ಬ್ಲಾಗು ಮುಚ್ಚುವ ಬದಲು ಬೇರೆ ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಹುಟ್ಟಿದ್ದೇ ಈ ಲೇಖನ. ಲೇಖನವನ್ನು ವಿಸ್ತ್ರತ ಓದುಗ ಬಳಗಕ್ಕೆ ಪರಿಚಯಿಸಿದ 'ಅವಧಿ' ಗೆ ಕೃತಜ್ಞತೆಗಳು. 'ಅವಧಿ' ಬ್ಲಾಗಿನಲ್ಲಿ ಈ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Monday, August 10, 2009

ಲಾಲ್‌ಬಾಗ್ ಸುಂದರಿಯರು...

'
ಲಾಲ್‌ಬಾಗ್ ಉದ್ಯಾನವನದಲ್ಲಿ ನಡೆಯುತ್ತಿರುವ ಪುಷ್ಪೋತ್ಸವದಲ್ಲಿ ಕಳೆದ ಶನಿವಾರದಂದು ಕಂಡ ಕೆಲವು ಬೆಡಗಿಯರು...

ಹೂವು, ಚೆಲುವೆಲ್ಲಾ ತಂದೆಂದಿತು...





ಹೂವೇ ಹೂವೇ...



"ನೀವು ಬರ್ತೀರಿ ಅಂತ ನಂಗೆ ಎಷ್ಟೊಂದು ಅಲಂಕಾರ ಮಾಡಿದಾರೆ ನೋಡಿ..."


"ನಮ್ದೂ ಫೋಟೋ ತೆಗೀರೀ..."

ನನ್ನ ಚೆಲುವಿಗಾರು ಸಾಟಿ...


"ಏಕೋ ಕಾಣೆ, ನಂಗೆ ನಾಚ್ಕೆ ಆಗುತ್ತೆ..."

"ಕೆಂಪುತೋಟದ ಕಂದಮ್ಮಗಳು ನಾವು..."




ಹೂವಿನ ಬಾಣದಂತೆ...



"ನನ್ನ ಹೆಸರಷ್ಟೇ ಡೈನೋಸಾರ್.. ಮೈತುಂಬಾ ಹೂಗಳೇ... "



ಹೂವೊಂದು, ಬಳಿ ಬಂದು, ಸೋಕಿತು ನನ್ನೆದೆಯಾ...


ಬರೀ ಇಷ್ಟೇನಾ ಅನ್ಬೇಡಿ... ಇನ್ನೂ ತುಂಬಾ ಇವೆ. ಎಲ್ಲಾ ಇಲ್ಲೇ ನೋಡಿಬಿಟ್ರೆ ಹ್ಯಾಗೇ :) ... ಲಾಲ್‌ಬಾಗ್ ಪುಷ್ಪೋತ್ಸವ ಆಗಸ್ಟ್ 15, ಸ್ವಾತಂತ್ರೋತ್ಸವದ ದಿನದವರೆಗೆ ನಡೆಯುತ್ತದೆ. ಒಂದ್ಸಲ ಹೋಗಿ ನೋಡ್ಕೊಂಡು ಬನ್ನಿ.
'
ಪ್ರೀತಿಯಿಂದ,
'

Wednesday, August 5, 2009

ಸಾರೀ ಪುಟ್ಟೀ, ನೆಕ್ಸ್ಟ್ ಟೈಮ್ ಮಿಸ್ ಮಾಡ್ಕೋಳಲ್ಲ...

'


ಇವತ್ತು ರಕ್ಷಾಬಂಧನ; ನನ್ನ ತಂಗಿ ನಾವು ಮೂರು ಜನ ಅಣ್ಣಂದಿರಿಗೆ ರಾಖಿ ಕಟ್ಟಲು ಊರಲ್ಲಿ ನಮ್ಮ ಮನೆ, ಅಂದ್ರೆ ತನ್ನ ತವರು ಮನೆಗೆ ಬಂದಿರ್ತಾಳೆ. ಆದರೆ ನಾನೊಬ್ಬ ನತದೃಷ್ಟ ಅಣ್ಣ ಮಾತ್ರ ಇಲ್ಲಿ ಬೆಂಗಳೂರೆಂಬ ಕರ್ಮಭೂಮಿಯಲ್ಲಿ ಕೆಲಸದ ಬಂಧಿಯಾಗಿ ಕುಳಿತಿದ್ದೇನೆ. "ಅಣ್ಣಾ ಪ್ಲೀಸ್, ಅವತ್ತೊಂದಿನ ಊರಿಗೆ ಬಂದ್ ಹೋಗೋ, ನಿಂಗೂ ರಾಖಿ ಕಟ್ಟತೇನೀ..." ಅಂತ ತಂಗಿ ಒಂದು ವಾರ ಮುಂಚೇನೇ ಕರೆದಿದ್ರೂ, ಹೋಗಬೇಕೆನ್ನೋ ಮಹದಾಸೆ ನಂಗೂ ಇದ್ರೂ ಹೋಗಲಾಗದ ಅಸಹಾಯಕತೆ ನನ್ನದು. ಊರಲ್ಲಿರುವ ನನ್ನಿಬ್ಬರು ಸಹೋದರರೇ ಅದೃಷ್ಟವಂತರು ಅನ್ಸುತ್ತೆ. ಇರುವ ಒಬ್ಬಳು ತಂಗಿ ಕೈಯಿಂದ ರಾಖಿ ಕಟ್ಟಿಸಿಕೊಂಡು, ತಂಗಿಯ ಶುಭಾಶೀರ್ವಾದ ಪಡೆಯುವ ಅವಕಾಶಾನ ನಾನೊಬ್ಬ ಮಾತ್ರ ಮಿಸ್ ಮಾಡ್ಕೋತಿದೀನಿ. ಆದರೆ ತಂಗಿ ಕೋರಿಯರ್ ನಲ್ಲಿ ಕಳಿಸಿದ ರಾಖಿಯನ್ನೇ ಕಣ್ಣಿಗೊತ್ತಿಕೊಂಡು ನಾನೇ ಸ್ವತಃ ಕಟ್ಟಿಕೊಂಡು ಅಷ್ಟಕ್ಕೇ ತೃಪ್ತಿಪಟ್ಟುಕೊಂಡು ಕುಳಿತಿದ್ದೇನೆ. ಸಾರೀ ತಂಗ್ಯವ್ವ, ನಾನು ಈ ವರ್ಷ ನಿನ್ನ ಕೈಯ್ಯಾರೇ ರಾಖಿಯಂತೂ ಕಟ್ಟಿಸ್ಕೊಳ್ಳೋಕಾಗ್ತಿಲ್ಲ. ಆದರೆ ನಿನ್ನ ಶುಭಾಶೀರ್ವಾದ, ಹಾರೈಕೆಗಳು ನನ್ನೊಂದಿಗೆ ಸದಾ ಇರ್ತವೆ ಅಂತ ಭಾವಿಸ್ತೀನಿ.

ಹುಟ್ಟಿದ ಊರು ಬಿಟ್ಟು ಬೆಂಗಳೂರಿನಲ್ಲಿ ಇದ್ದು ಕಳೆದುಕೊಳ್ಳುತ್ತಿರುವ ಸೌಭಾಗ್ಯಗಳಲ್ಲಿ ಇದೂ ಒಂದು. ಊರಲ್ಲಿದ್ದಾಗ ಕಳೆದ ರಕ್ಷಾಬಂಧನದ ದಿನಗಳ ಮೆಲುಕೇ ಈ ದಿನ ನನ್ನ ಸಂಗಾತಿ. ಚಿಕ್ಕವಳಿದ್ದಾಗ ತಂಗಿ, "ನನಗ ಅಂಗಡಿಗೆ ಹೋಗಿ ರಾಖಿ ತರಾಕ ಗೊತ್ತಾಗುದಿಲ್ಲ, ನೀವsss ತಂದು ಕೊಟ್ರ ರಾಖಿ ಕಟ್ಟತೇನಪಾ" ಅಂತ ಮುಗ್ಧವಾಗಿ ಹೇಳಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸ್ತಿದ್ಲು. "ನಾವsss ರಾಖಿ ತಂದು ಕೊಟ್ಟು ಕಟ್ಟಸ್ಕೊಂಡು ನಿನಗ ಗಿಫ್ಟ್ ಕೊಡಬೇಕೇನವಾ, ಹೋಗೋಗ್.." ಅಂತ ನಾವು ಅಣ್ಣಂದಿರು ಅವಳಿಗೆ ಗೋಳು ಹುಯ್ಕೋತಿದ್ವಿ. ರಾಖಿ ಮತ್ತು ಪೇಢಾ ತಂದುಕೊಟ್ಟು, ನಾವು ಮೂರೂ ಜನ ಅಣ್ಣಂದಿರು ಬೆಳಿಗ್ಗೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟುಕೊಂಡು ತಂಗಿ ಕೈಯಲ್ಲಿ ರಾಖಿ ಕಟ್ಟೀಸ್ಕೊಳ್ಳೋಕೆ ಸಾಲಾಗಿ ಮಣೆ ಹಾಕಿಕೊಂಡು ಕೂಡ್ತಿದ್ವಿ. ತಂಗಿ ಬಂದು ನಮ್ಮೆಲ್ಲರ ಹಣೆಗೆ ವಿಭೂತಿ ಪಟ್ಟಿ ಬಳಿದು, ಆರತಿ ತಟ್ಟೆಯಲ್ಲಿನ ಜ್ಯೋತಿಯ ಬಿಸಿಗೆ ವೀಳ್ಯದೆಲೆ ಕಾಯಿಸಿ, ನಮ್ಮ ಹಣೆಗೆ ವೀಳ್ಯದೆಲೆಯ ಕಪ್ಪು-ಕಾಡಿಗೆ ಬೊಟ್ಟು ಹಚ್ಚಿ, ತನ್ನ ಮುದ್ದಾದ ಪುಟ್ಟ-ಪುಟ್ಟ ಕೈಗಳಿಂದ ನಮ್ಮೆಲ್ಲರಿಗೂ ರಾಖಿ ಕಟ್ಟಿ, ಬಾಯಲ್ಲಿ ಪೇಢಾ ಹಾಕಿ, ಸರತಿಯಂತೆ ನಮಗೆ ಆರತಿ ಬೆಳಗುತ್ತಿದ್ದಳು. ಅಪ್ಪ ನಮಗೆ ಮೊದಲೇ ಕೊಟ್ಟಿರುತ್ತಿದ್ದ ಪುಡಿಗಾಸಿನ ಜೊತೆಗೆ ನಾವು ಮಣ್ಣಿನ ಕುಡಿಕೆಯಲ್ಲಿ ಕೂಡಿಟ್ಟಿರುತ್ತಿದ್ದ ಬಿಡಿಗಾಸನ್ನೂ ಸೇರಿಸಿ ಆರತಿ ತಟ್ಟೆಯಲ್ಲಿ ಹಾಕಿ ನಾವೆಲ್ಲ ತಂಗಿಯ ಶುಭಾಶೀರ್ವಾದ ಪಡೀತಿದ್ವಿ. ನಂತರ ತಂಗಿ ಕಟ್ಟಿದ್ದ ರಾಖಿಯನ್ನು ಹೆಮ್ಮೆಯಿಂದ ಪದೇ ಪದೇ ನೋಡಿಕೊಳ್ಳುತ್ತ ಶಾಲೆಯ ಕಡೆ ಹೆಜ್ಜೆ ಹಾಕ್ತಿದ್ವಿ. ನಾವು ಹೋಗುತ್ತಿದ್ದ ಶಾಲೆ ಬರೀ ಗಂಡು ಮಕ್ಕಳ ಶಾಲೆಯಾದ್ದುದರಿಂದ ಶಾಲೆಯಲ್ಲಿ ರಾಖಿ ಕಟ್ಟಲು ಬರುವ ಹುಡುಗಿಯರ ಕಾಟವಾಗಲಿ, ನಾವು ಅವರಿಂದ ತಪ್ಪಿಸಿಕೊಂಡು ಓಡುವ ಪ್ರಸಂಗವಾಗಲಿ ನಮಗೆ ಬರುತ್ತಿರಲಿಲ್ಲ ಬಿಡಿ :) ಸ್ಕೂಲಲ್ಲಿ ಓರಗೆಯ ಗೆಳೆಯರಿಗೆ ನಮ್ಮ ಕೈಯಲ್ಲಿನ ರಾಖಿ ತೋರಿಸಿ "ನಮ್ ತಂಗಿ ಕಟ್ಟಿದ ರಾಖಿ ನೋಡ್ರಲೇ, ಎಷ್ಟ್ ಛಂದ್ ಐತೀ" ಅಂತ ಜಂಭ ಕೊಚ್ಚಿಕೋತಿದ್ವಿ. ರಕ್ಷಾಬಂಧನ ಮುಗಿದು ಮೂರ್ನಾಲ್ಕು ದಿನಗಳು ಕಳೆದು, ರಾಖಿಯಲ್ಲಿನ ಚಿತ್ತಾರದ ಪಕಳೆಗಳು ಒಂದೊಂದಾಗಿ ಕಳಚಿ ಬಿದ್ದು, ಕಡೆಗೆ ದಾರವೊಂದೇ ಉಳಿಯುವವರೆಗೆ ರಾಖಿ ಬಿಚ್ಚುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ನಮಗೆಲ್ಲ ನಮ್ಮ ತಂಗಿಯ ಮೇಲೆ ಮತ್ತು ಅವಳು ಕಟ್ಟಿದ ರಾಖಿಯ ಮೇಲೆ.

ಫೂಲೋಂಕಾ ತಾರೋಂಕಾ ಸಬ್ಕಾ ಕೆಹ್ನಾ ಹೈ,
ಏಕ್ ಹಜಾರೋಂ ಮೇಂ ಮೇರಿ ಬೆಹ್ನಾ ಹೈ,
ಸಾರೀ ಉಮರ್ ಹಮೇ ಸಂಗ್ ರೆಹ್ನಾ ಹೈ...


ಮುಂದೆ ಸ್ಕೂಲು ಮುಗಿದು ಕಾಲೇಜು ಓದಲು ಹುಬ್ಬಳ್ಳಿಯಲ್ಲಿ ಇದ್ದಾಗಲೂ ತಪ್ಪದೇ ಪ್ರತಿ ವರ್ಷ ರಕ್ಷಾಬಂಧನದ ದಿನ ಊರಿಗೆ ಹೋಗಿ ಬರ್ತಿದ್ದೆ. ಮದುವೆಯಾದ ಮೇಲೆ ತಂಗಿಯೂ ಪ್ರತಿ ವರ್ಷ ತಪ್ಪದೇ ರಕ್ಷಾಬಂಧನದ ದಿನ ಊರಿಗೆ ಬರ್ತಾಳೆ. ಉನ್ನತ ವ್ಯಾಸಂಗಕ್ಕಾಗಿ ನಾನು ಬೆಂಗಳೂರಿಗೆ ಬಂದ ಮೇಲೆಯೇ ರಕ್ಷಾಬಂಧನದ ದಿನ ಊರಲ್ಲಿರಲಾಗದ ಹತಭಾಗ್ಯ ನನ್ನದಾಗಲು ಶುರುವಾಯಿತು. ಕೆಲವು ಸಲ ಊರಿಗೆ ಹೋಗಲು ಸಾಧ್ಯವಾಗಿದ್ದರೂ, ಈ ಶುಭದಿನವನ್ನು ಮಿಸ್ ಮಾಡ್ಕೊಂಡಿದ್ದೇ ಹೆಚ್ಚು ಸಲ.

ನನ್ನ ಮುದ್ದು ತಂಗ್ಯವ್ವ, ನಂಗೊತ್ತು, ಇವತ್ತು ಊರಲ್ಲಿ ಉಳಿದ ಇನ್ನಿಬ್ಬರು ಅಣ್ಣಂದಿರಿಗೆ ರಾಖಿ ಕಟ್ಟುವಾಗ ನೀ ನನ್ನನ್ನು ಖಂಡಿತ ಮಿಸ್ ಮಾಡ್ಕೊಂಡಿರ್ತೀಯಾ ಅಂತ. ಸಾರೀ ಪುಟ್ಟೀ, ಬೇಜಾರ್ ಮಾಡ್ಕೊಬೇಡ; ಇದೊಂದು ಸರ್ತಿ ಕ್ಷಮಿಸಿಬಿಡು. ನೀ ಕಳಿಸಿದ ರಾಖಿ ಇವತ್ತು ಬೆಳಿಗ್ಗೇನೇ ನನ್ನ ಕೈ ಸೇರಿದೆ. ನಿನ್ನ ಹೆಸರು ಹೇಳಿಕೊಂಡು ಅದನ್ನ ನನ್ನ ಕೈಗೆ ನಾನೇ ಕಟ್ಕೊಂಡಿದೀನಿ. ಇದೊಂದು ಸರ್ತಿ ನೀನು ಅಲ್ಲಿಂದಲೇ ನಂಗೆ ಶುಭಾಶೀರ್ವಾದ ಮಾಡಿ, "ನಿಂಗೆ ಒಳ್ಳೆಯದಾಗಲಿ ಅಣ್ಣ" ಅಂತ ಹಾರೈಸಿಬಿಡು. ಮುಂದಿನ ಸಲ ನಿನ್ನ ಕೈಯಾರೆ ರಾಖಿ ಕಟ್ಟಿಸ್ಕೊಳ್ಳೋಕೆ ತಪ್ಪದೇ ಊರಿಗೆ ಬರ್ತೀನಿ, ಮಿಸ್ ಮಾಡ್ಕೋಳಲ್ಲ, ಪ್ರಾಮೀಸ್! :)
'

ಚಿತ್ರಕೃಪೆ: ಅಂತರ್ಜಾಲ'

Monday, June 8, 2009

ಎನ್ನ ಮನ ಕಾಡುತಿಹ ಚೆಲುವ ಮಲ್ಲಿಗೆ ಹೂವೇ...



ಬೆಳದಿಂಗಳ ಬಾಲೆ,


ಕನಸಿನ ಕಣ್ಮಣಿ, ಸ್ವಪ್ನ ಸುಂದರಿ, ಕಲ್ಪನಾ ಕನ್ಯೆ, ಭಾವಿ ಬಾಳಿನ ಸುಪ್ತದೀಪ್ತೀ... ಈವರೆಗೂ ನನ್ನ ಕೈಗೆ ಸಿಗದೆ, ಕಣ್ಣಿಗೂ ಕಾಣದೆ ಇಲ್ಲೇ ಎಲ್ಲೋ ಇರುವ ನಿನ್ನನ್ನ ಏನಂತ ಕರೆಯಲಿ? ನೀ ಎಲ್ಲಿರುವೆ, ಹೇಗಿರುವೆ ಎಂಬ ಸ್ಪಷ್ಟವಾದೊಂದು ಕಲ್ಪನೆಯೂ ಇಲ್ಲದೇ ನಿನಗೀ ಪತ್ರ ಬರೆಯುತ್ತಿದ್ದೇನೆ. ನೀ ಎಲ್ಲಾದರೂ ಇರು, ಹೇಗಾದರೂ ಇರು, ನಮ್ಮಿಬ್ಬರ ಮದುವೆ ಯಾವತ್ತೋ ಸ್ವರ್ಗದಲ್ಲೇ ನೆರವೇರಿರುವುದರಿಂದ ನೀ ನನಗೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗ್ತೀಯ ಅನ್ನೋ ಆಶಾವಾದದೊಂದಿಗೆ ನಿನಗೀ ಓಲೆ.

ಚೆಲುವೆ ಎಲ್ಲಿರುವೆ,
ಮನವ ಕಾಡುವ ರೂಪಸಿಯೇ,
ಬಯಕೆಯ ಬಳ್ಳಿಯ,
ನಗುವ ಹೂವಾದ ಪ್ರೇಯಸಿಯೇ...

ನಿಂಗೊತ್ತಾ? ನಿನ್ನ ಬಗ್ಗೆ ಒಂದು ಅಮೂರ್ತ ಕಲ್ಪನೆಯಿಟ್ಟುಕೊಂಡೇ ಪ್ರತಿನಿತ್ಯ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಹುಡುಕ್ತಾ ಇರ್ತೀನಿ. ನಾ ಪ್ರತಿನಿತ್ಯ ನಡೆದುಕೊಂಡು ಹೋಗುವ ಹಾದಿಯಲ್ಲಿ ಎದಿರಾಗುವ ಪ್ರತಿ ಹುಡುಗಿಯಲ್ಲಿ, ಬಸ್ಟ್ಯಾಂಡಿನಲ್ಲಿ ನನ್ನೊಂದಿಗೆ ಬಸ್ಸಿಗೆ ಕಾಯುತ್ತಾ ನಿಲ್ಲುವ ಪ್ರತಿ ಪ್ರಮೀಳೆಯಲ್ಲಿ, ಹತ್ತಿದ ಬಸ್ಸಿನಲ್ಲಿ ಸೀಟು ಸಿಗದೆ ನಿಂತ ಪ್ರತಿ ನೀಳಕಾಯದ ಶ್ವೇತಸುಂದರಿಯಲ್ಲಿ, ಊರಿಗೆ ಹೋಗುವಾಗ ರೈಲಿನಲ್ಲಿ ಜೊತೆಯಾಗುವ ಪ್ರತಿ ಲಲನಾಮಣಿಯಲ್ಲಿ, ಗೆಳೆಯರೊಂದಿಗೆ ಬೀದಿ ಸುತ್ತುವಾಗ ನೋಡುವ ಪ್ರತಿ ಕನ್ಯಾರತ್ನದಲ್ಲಿ, ಹೊಟೇಲಿನಲ್ಲಿ ಊಟ ಮಾಡುವಾಗ ಗೆಳತಿಯರೊಂದಿಗೋ ಇಲ್ಲ ಅಪ್ಪ-ಅಮ್ಮನೊಂದಿಗೋ ಬಂದು ಎದುರಿನ ಟೇಬಲ್ಲಿನಲ್ಲಿ ಆಸೀನಳಾಗಿ ಥೇಟ್ ನನ್ ಥರಾನೇ "ತಿನ್ನೋಕೆ ಏನು ಆರ್ಡರ್ ಮಾಡೋದು?" ಎಂದು ಪೇಚಾಡುವ ಪ್ರತಿ ಪೆದ್ದುಮಣಿಯಲ್ಲಿ, ಗೆಳೆಯನೊಬ್ಬನ ಮದುವೆಯಲ್ಲಿ ವಧುವಿಗಿಂತಲೂ ಚೆನ್ನಾಗಿ ಸಿಂಗರಿಸಿಕೊಂಡು ಜಿಂಕೆ ಮರಿಯಂತೆ ಅತ್ತಿಂದಿತ್ತ ಓಡಾಡುವ ವಧುವಿನ ಗೆಳತಿಯರಲ್ಲಿ, ವಾರಾಂತ್ಯದಲ್ಲಿ ದೇವರ ದರ್ಶನಕ್ಕಾಗಿ ನಾ ಹೋಗುವ ದೇವಸ್ಥಾನಕ್ಕೆ "ನನಗೊಬ್ಬ ಒಳ್ಳೆಯ ಗಂಡನನ್ನು ದಯಪಾಲಿಸು ತಂದೇ" ಎಂದು ದೇವರಲ್ಲಿ ಮೊರೆಯಿಡಲು ಬರುವ ಪ್ರತಿ ಭಕ್ತ ಶಿಖಾಮಣಿಯಲ್ಲಿ, ಶಾಪಿಂಗ್ ಮಾಲ್ ನಲ್ಲಿ ಕೊಳ್ಳಲು ಬಂದಿದ್ದನ್ನು ಮರೆತು ಕಣ್ಣಿನಲ್ಲೇ ಬೇರೆ ಇನ್ನೇನನ್ನೋ ಹುಡುಕುವ ಕನ್ಫ್ಯೂಸ್ಡ್ ಹುಡುಗಿಯರಲ್ಲಿ,.... ಹೀಗೆ ಪ್ರತಿನಿತ್ಯ ಎದುರಾಗುವ ಪ್ರತಿ ಸಾಧಾರಣ ಸುಂದರಿಯಲ್ಲೂ ನಿನ್ನ ಸಾಕಾರ ರೂಪ ಕಾಣೋಕೆ ಹವಣಿಸ್ತಿರ್ತೀನಿ.

ಡ್ರೀಮ್ ಗರ್ಲ್,
ಕಿಸೀ ಶಾಯರ್ ಕೀ ಗಝಲ್,

ಡ್ರೀಮ್ ಗರ್ಲ್,
ಕಿಸೀ ಝೀಲ್ ಕಾ ಕಂವಲ್,

ಕಹೀಂ ತೋ ಮಿಲೆಗೀ,
ಕಭಿ ತೋ ಮಿಲೆಗೀ,

ಆಜ್ ನಹೀ ತೋ ಕಲ್...

ಆದರೆ ಕೊನೆಗೆ, ಹೀಗೆ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಕಾಣದೆ ನಿರಾಶೆಗೊಳ್ತೀನಿ. ಪ್ರತಿಯೊಬ್ಬಳನ್ನೂ, ಛೇ! ಇವಳು ಸ್ವಲ್ಪ ಜಾಸ್ತೀನೇ ಮಾಡರ್ನ್; ನಮ್ಮ ಸಂಪ್ರದಾಯಸ್ಥ ಮನೆಗೆ ಸರಿ ಹೋಗಲ್ಲ,... ಉಹೂಂ, ಇವಳಿಗ್ಯಾಕೋ ಸ್ವಲ್ಪ ಕೊಬ್ಬು ಜಾಸ್ತಿ ಅನ್ಸುತ್ತೆ,... ಅರೆ! ಇವಳು ಈಗ ಸ್ವಲ್ಪ ಹಿಂದೆ ಅಂದುಕೊಂಡಷ್ಟು ಚೆನ್ನಾಗಿಲ್ಲ,... ಹ್ಮ್! ಇವಳ್ಯಾಕೋ ತುಂಬಾನೆ ಚೈಲ್ಡಿಶ್ ಅನ್ಸುತ್ತೆ,... ಅಯ್ಯೋ ಬೇಡಪ್ಪ - ನಾ ದುಡಿಯೋದೆಲ್ಲಾ ಇವಳ ಮೇಕಪ್ಪಿಗೇ ಸರಿ ಹೋಗುತ್ತೆ,... ಇವಳ್ಯಾಕೋ ತುಂಬಾನೆ ಚೆನ್ನಾಗಿದಾಳೆ - ಗಗನ ಕುಸುಮ!,... ಅಯ್ಯಪ್ಪ, ಇವಳು ತೀರಾ ದಪ್ಪ ಇದಾಳೆ,... ಅಯ್ಯೋ ಬೇಡ - ಇವಳ ನಖರಾ ಯಾಕೋ ಜಾಸ್ತಿಯಾಯ್ತು,... ಹ್ಮ್! ಇದು ನನಗೆ ಸಿಗದ ಹುಳಿ ದ್ರಾಕ್ಷಿ,... ಅಬ್ಬಾ! ಇವಳಾಡೋದು ನೋಡಿದ್ರೆ ಇವಳು ನನ್ನೊಂದಿಗೆ ಮತ್ತು ನಮ್ಮ ಮನೆಯವರೊಂದಿಗೆ ಹೊಂದಿಕೊಳ್ಳೋ ಚಾನ್ಸೇ ಇಲ್ಲ,... ಎಲ್ಲ ಸರಿ - ಆದ್ರೆ ಇವಳನ್ನ ನನ್ನ ಅಪ್ಪ-ಅಮ್ಮ ಒಪ್ಕೊಳ್ಳೋದು ಡೌಟು,... ಹೀಗೆ ಒಂದಿಲ್ಲೊಂದು ಕಾರಣದಿಂದ 'ಅವಳು' ನೀನಲ್ಲ ಎಂಬ ತೀರ್ಮಾನಕ್ಕೆ ಬಂದಿರ್ತೇನೆ :)

ಜಾನೆ ಜಾನ್,
ಡೂಂಡತೇ ಫಿರ್ ರಹಾ,
ಹೂಂ ತುಮ್ಹೆ ರಾತ್ ದಿನ್,
ಮೈ ಯಹಾಂ ಸೆ ವಹಾಂ.
ಮುಝ್ಕೋ ಆವಾಜ್ ದೋ,

ಚುಪ್ ಗಯೀ ಹೋ ಸನಮ್,
ತುಮ್ ಕಹಾಂ...

"ಮೈ ಯಹಾಂ" ಅಂತ ಒಂದ್ಸಲ ನಂಗೆ ಕೇಳ್ಸೋವಷ್ಟು ಜೋರಾಗಿ ಕೂಗೆ ಪ್ಲೀಸ್... :) .

ನಿನ್ನ ಬಗೆಗಿನ ನನ್ನ ಅಪಕ್ವ ಕಲ್ಪನೆಗಳೆಲ್ಲ ಒತ್ತಟ್ಟಿಗಿರಲಿ; ಅಸಲಿಗೆ ನೀನು ಇರುವುದಾದರೂ ಹೇಗೆ? ನಾನೋ ಒಬ್ಬ ಸಾಮಾನ್ಯ, ಮಧ್ಯಮ ವರ್ಗದ ಹುಡುಗ. ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾವುಕ; ನಾನೇ ಹೇಳ್ಕೊಳ್ಳೋ ಹಾಗೆ - ಜೀವನದ ಪ್ರತಿ ಪುಟ್ಟ ಸಂತಸದಲ್ಲೂ ಸಂಭ್ರಮಿಸುವ ಭಾವಜೀವಿ. ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ; ಆದ್ರೆ, ತುಂಬಾ ಹತ್ತಿರದವರನ್ನ ನನ್ನನ್ನು ನಾನೇ ಪ್ರೀತಿಸದಷ್ಟು ಹೆಚ್ಚಾಗಿ ಪ್ರೀತಿಸ್ತೇನೆ ಮತ್ತು ಗೌರವಿಸ್ತೇನೆ. ನೀನೂ ನನ್ನಂತೆ ನಾ? ನೀನೂ ನನ್ನಂತೆ ಭಾವಜೀವಿಯಾ? ನನ್ನಂತೆ ನೀನೂ ಅಪ್ಪ-ಅಮ್ಮನನ್ನು ಬೆಟ್ಟದಷ್ಟು ಪ್ರೀತಿಸ್ತೀಯ? ನನ್ನಂತೆ ಮಿತಭಾಷೀಯಾ ಅಥವಾ ಬಾಯಿ ಹರಿದು ಹೋಗುವಂತೆ ಇಪ್ಪತ್ನಾಲ್ಕು ಗಂಟೆನೂ ವಟವಟಾ ಅಂತ ವಟಗುಡ್ತಿರ್ತೀಯ :) ? ನನ್ನಂತೆ ನೀನೂ ಕಿಶೋರ್, ರಫಿ, ಲತಾ, ಸೋನು, ಶ್ರೇಯಾ, ಪೀ ಬೀ ಎಸ್, ರಾಜ್‌ಕುಮಾರ್, ಜಾನಕಿ, ಎಸ್ ಪೀ ಬೀ ಹಾಡುಗಳನ್ನು ಇಷ್ಟ ಪಡ್ತೀಯ? ನನ್ ಥರಾ ಆಗಾಗ ತರ್ಲೆ ಜೋಕು ಹೇಳಿ ಜೊತೆಗಿರೋರನ್ನ ನಗಿಸೋಕೆ ಪ್ರಯತ್ನಿಸ್ತಿರ್ತೀಯಾ? ಗೆಳೆಯನೋ, ಗೆಳತಿಯೋ ಮುಖ ಚಿಕ್ಕದು ಮಾಡಿಕೊಂಡು ಕುಳಿತಾಗ ಕಳವಳಗೊಂಡು"ಏನಾಯ್ತೋ" ಎಂದು ಆತ್ಮೀಯತೆಯಿಂದ ವಿಚಾರಿಸ್ತೀಯ? ನೀನೂ ನನ್ ಥರಾ ಹೀಗೆಯೇ ನಾನೆಲ್ಲಿದೀನಿ, ಹೇಗೀದೀನಿ ಅನ್ನೋ ಪುಟ್ಟದೊಂದು ಅಂದಾಜೂ ಇಲ್ಲದೇ ನಂಗೋಸ್ಕರ ಪತ್ರ, ಕವನ ಏನಾದ್ರೂ ಬರೀತಾ ಇದೀಯಾ?

ನೀನೆಂದರೆ ನನ್ನೊಳಗೆ,
ಏನೋ ಒಂದು ಸಂಚಲನ,
ನಾ ಬರೆಯದಾ ಕವಿತೆಗಳ,
ನೀನೇ ಒಂದು ಸಂಕಲನ,
ಓ ಜೀವವೇ ಹೇಳಿಬಿಡು,
ನಿನಗೂ ಕೂಡ ಹೀಗೇನಾ...

ಕೆಲವು ಸಂದರ್ಭಗಳಲ್ಲಿ ನಿನ್ನ ಅನುಪಸ್ಥಿತಿ ನನ್ನ ತುಂಬಾ ಕಾಡುತ್ತೆ ಕಣೇ
:( ... ಕಳೆದ ವರ್ಷ ಕೆಲಸದ ಮೇಲೆ ಅಮೇರಿಕಕ್ಕೆ ಹೋದಾಗ, ಅಲ್ಲಿ ಅಡುಗೆ ಮಾಡ್ಕೊಳ್ಳೋಕೆ ಪ್ರಯತ್ನ ಪಡ್ತಾ ಕೈ ಸುಟ್ಟುಕೊಂಡಾಗ, ಏನೋ ಅಡುಗೆ ಮಾಡೋಕೆ ಹೋಗಿ ಅದು ಇನ್ನೇನೋ ಆದಾಗ, ಅಲ್ಲಿ ಸಾಂತಾ ಕ್ರೂಸ್ ಬೀಚಿನ ದಂಡೆ ಮೇಲೆ ಒಬ್ಬನೇ ಅಲ್ಲೆಯುತ್ತಿದ್ದಾಗ, ಮನಮೋಹಕ ತಾಹೋ ಸರೋವರದ ಸುತ್ತಮುತ್ತ ಮಂಜಿನೊಂದಿಗೆ ಆಟವಾಡುತ್ತಿದ್ದಾಗ, ಮೊಂಟರಿ ಬೇ ಅಕ್ವೇರಿಯಮ್ ನಲ್ಲಿ ಮತ್ಸ್ಯಗಳ ಸುಂದರ ಲೋಕದಲ್ಲಿ ವಿಹರಿಸುತ್ತಿದ್ದಾಗ, ಮಿಶನ್ ಪೀಕ್ ಬೆಟ್ಟದ ತುದಿಯಲ್ಲಿದ್ದಾಗ, ಸ್ಯಾನ್ ಫ್ರಾನ್ಸ್ಸಿಸ್ಕೊ ಗೋಲ್ಡನ್ ಗೇಟ್ ಬ್ರಿಡ್ಜ್ ನ ಮೇಲೆ ಓಡಾಡುತ್ತಿದ್ದಾಗ, ಲಾಸ್ ಎಂಜೀಲಿಸ್ ನ ಡಿಸ್ನೀಲ್ಯಾಂಡ್ ನಲ್ಲಿ ಫನ್ ರೈಡ್ಸ್ ಆಡೋವಾಗ, ಹಾಲಿವುಡ್ ನ ಯೂನಿವರ್ಸಲ್ ಸ್ಟುಡಿಯೋದಲ್ಲಿ ಸ್ಟುಡಿಯೊ ಟೂರಿಗೆ ಹೋದಾಗ, ಮತ್ತೆ ಕೆಲವು ತಿಂಗಳ ಹಿಂದೆ ಕೊಡಚಾದ್ರಿ ಬೆಟ್ಟದ ಮೇಲೆ ಸೂರ್ಯೋದಯದ ಸೊಬಗು ಸವಿಯುತ್ತಿದ್ದಾಗೆಲ್ಲ ನಿನ್ನನ್ನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಂಡೆ; ನೀನೂ ಜೊತೆಗಿದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ಅಂತ.

ಮೈ, ಔರ್ ಮೇರಿ ತನಹಾಯೀ,
ಅಕ್ಸರ್ ಯೇ ಬಾತೇ ಕರ್ತೇ ಹೈ.

ತುಮ್ ಹೋತೀ ತೋ ಕೈಸಾ ಹೋತಾ,

ತುಮ್ ಯೇ ಕೆಹ್ತಿ,
ತುಮ್ ವೋ ಕೆಹ್ತಿ,
ತುಮ್ ಈಸ್ ಬಾತ್ ಪೆ ಹೈರಾನ್ ಹೋತೀ,
ತುಮ್ ಉಸ್ ಬಾತ್ ಪೆ ಕಿತ್ನೀ ಹಸ್ತೀ,
ತುಮ್ ಹೋತೀ ತೋ ಐಸಾ ಹೋತಾ,
ತುಮ್ ಹೋತೀ ತೋ ವೈಸಾ ಹೋತಾ,

ಮೈ, ಔರ್ ಮೇರಿ ತನಹಾಯೀ,

ಅಕ್ಸರ್ ಯೇ ಬಾತೇ ಕರ್ತೇ ಹೈ.

ನಾಳೆ ಮದುವೆಯಾದ ಮೇಲೆ, ನಿನ್ನ ಅಪ್ಪ-ಅಮ್ಮನನ್ನು ಕಂಡಷ್ಟೇ ಪ್ರೀತ್ಯಾದರಗಳಿಂದ ನನ್ನ ಅಪ್ಪ-ಅಮ್ಮನನ್ನೂ ಕಾಣಬಲ್ಲೆಯಾ? ನಾ ಚಿಕ್ಕದೊಂದು ಗೆಲುವಿನೊಂದಿಗೆ ಮನೆಗೆ ಬಂದಾಗ ಒಂದು ಹೆಮ್ಮೆಯ ಮುಗುಳ್ನಗೆಯೊಂದಿಗೆ ನನ್ನ ಸ್ವಾಗತಿಸ್ತೀಯಾ? ಸೋತು ಸುಣ್ಣವಾಗಿ ಬಂದಾಗ ಎರಡು ಸಾಂತ್ವನದ ನುಡಿಗಳನ್ನು ಹೇಳಿ ಮತ್ತೆ ನನ್ನನ್ನು ಚೈತನ್ಯದ ಚಿಲುಮೆಯಾಗಿಸ್ತೀಯಾ? ಕೃಷಿಯಾಧಾರಿತ, ಮಧ್ಯಮವರ್ಗದ, ಸಂಪ್ರದಾಯಸ್ಥ ಮನೆ ನಮ್ಮದು; ನಮ್ಮ ಮನೆಯ ಸಂಪ್ರದಾಯ, ಶಿಷ್ಟಾಚಾರಗಳನ್ನು ನನ್ನಷ್ಟೇ ಶ್ರದ್ಧೆಯಿಂದ ಪಾಲಿಸ್ತೀಯಾ? ಹುಣ್ಣಿಮೆ ಬೆಳದಿಂಗಳಲ್ಲಿ ನನ್ ಜೊತೆ ಕೂತ್ಕೊಂಡು ಚುಕ್ಕಿಗಳನ್ನು ಎಣಿಸೋಕೆ ಹೆಲ್ಪ್ ಮಾಡ್ತೀಯಾ? ಮತ್ತೆ, ನಾ ಆಫೀಸಿನಿಂದ ಲೇಟಾಗಿ ಬಂದಾಗ ಹುಸಿಗೋಪ ತೋರಿಸಿ "ನಾಳೆಯಿಂದ ಬೇಗ ಬರ್ದಿದ್ರೆ ನಿಮ್ಗೆ ಊಟ ಇಲ್ಲ!" ಅಂತ ಹೆದ್ರಿಸ್ತೀಯ? ಚಿಕ್ಕದೊಂದು ನಿರುಪದ್ರವಿ ಸುಳ್ಳು ಹೇಳಿ ಸಿಕ್ಕಿಬಿದ್ದಾಗ ನನ್ನ ಕಿವಿ ಹಿಂಡಿ "ಇನ್ನೊಂದು ಸಲ ಸುಳ್ಳು ಹೇಳಿದ್ರೆ ನಾ
ನನ್ನ ತವರು ಮನೆಗೆ ಹೊರ್ಟೋಗ್ತೀನಿ" ಅಂತ ಹೇಳಿ ನಂಗೆ ಭಯ ಬೀಳಿಸ್ತೀಯ? ಏನೋ ಒಂದು ತರ್ಲೆ ಮಾಡಿ ನನ್ಹತ್ರ ಬೈಸಿಕೊಂಡಾಗ ಪುಟ್ಟ ಮಗುವಿನಂತೆ ಗಲ್ಲ ಊದಿಸಿಕೊಂಡು ಕೂಡ್ತೀಯಾ? ಇಷ್ಟೆಲ್ಲಾ ನಿರೀಕ್ಷೆ ತುಂಬಾ ಜಾಸ್ತಿ ಅನ್ನಿಸಿದ್ರೆ, ಕಡೆ ಪಕ್ಷ ನನ್ನ ನಗುವಿಗೆ ನಗುವಾಗಿ, ಅಳುವಿಗೆ ಅಳುವಾಗಿ ಸಾಥ್ ನೀಡಬಲ್ಲೆಯಾ? ನಿನ್ನಿಂದ ನಾನು ಇಷ್ಟೇ-ಇಷ್ಟು ಸಾಮಾನ್ಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾ? ಹಾಂ! ಚಿಂತೆಬೇಡ; ಅಷ್ಟು ನಿರೀಕ್ಷೆಗಳನ್ನು ನೀನೂ ನನ್ನ ಬಗ್ಗೆ ಇಟ್ಟುಕೋಬಹುದು ಮತ್ತು ನಿನ್ನ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಬಲ್ಲೆ. ಹೇಳು, ಕಷ್ಟ-ಸುಖ ಏನೇ ಬರಲಿ, ನೀನು ನನ್ನ ಬಿಟ್ಟು ಇರಲ್ಲ ಅಲ್ಲ್ವಾ..?

ವಾದಾ ಕರ್ ಲೇ ಸಾಜನಾ,
ತೇರೆ ಬಿನಾ ಮೈ ನಾ ರಹೂ,
ಮೇರೆ ಬಿನಾ ತೂ ನಾ ರಹೆ,
ಹೋಕೇ ಜುದಾ...

ಸಾಧಾರಣ, ಮಧ್ಯಮ ವರ್ಗದ ಮನೆತನದಲ್ಲಿ ಹುಟ್ಟಿ, ಕೃಷಿಕ ಮನೆತನದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಈ ಮಟ್ಟಕ್ಕೆ ಬೆಳೆಯಲು ತುಂಬಾ ಕಷ್ಟ ಪಟ್ಟಿದ್ದೇನೆ, ಸಾಕಷ್ಟು ತ್ಯಾಗ ಮಾಡಿದ್ದೇನೆ. ಬಳಲಿ ಬೆಂಡಾಗಿ ಬಂದಾಗ ನಿನ್ನ ಮಡಿಲು ನನಗೆ ತಂಪನೀಯಬಲ್ಲುದು ಎಂದು ಆಶಿಸಿದ್ದೇನೆ; ನನಗೆ ನಿರಾಸೆ ಮಾಡಲ್ಲ ತಾನೇ?...


ಬೇಕು ಬದುಕಲಿ,
ಸಾಕು ಅನಿಸುವಷ್ಟು ಮೌನ,
ಬೇಕು ಅನಿಸುವಷ್ಟು ಮಾತು,
ಹಿಡಿ-ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ...

ಮನೆಯಲ್ಲಿ ಅಪ್ಪ-ಅಮ್ಮನ ಒತ್ತಡಕ್ಕೆ ಮಣಿದು ಇನ್ನು ಕೆಲವು ದಿನಗಳಲ್ಲಿ ನಿನ್ನ ಅಧಿಕೃತ ಅನ್ವೇಷಣೆ ಶುರುವಾಗಲಿದೆ. ಇದುವರೆಗೂ ಕಾಣದ ನಿನ್ನ ಜೊತೆಗೂಡಿ ಸುಂದರ ಬಾಳಗೊಪುರ ಕಟ್ಟುವ ಕನಸು ಕಂಡಿದ್ದೇನೆ. ಇಷ್ಟು ದಿನ ನನ್ನ ಕೈಗೆ ಸಿಗದೆ ಸತಾಯಿಸಿದ್ದಕ್ಕೆ ನಿನ್ನೊಂದಿಗೆ ಸಿಕ್ಕಾಪಟ್ಟೆ ಜಗಳ ಆಡಬೇಕಿದೆ. ಸಾಂತಾ ಕ್ರೂಸ್ ಬೀಚಿನ ದಂಡೆಯ ಮೇಲಿಂದ ನಿನ್ಗೋಸ್ಕರ ವಿಧವಿಧದ ಕಪ್ಪೇಚಿಪ್ಪುಗಳನ್ನ, ಶಂಖಗಳನ್ನ ಮತ್ತು ಇನ್ನೂ ಏನೇನನ್ನೋ ತಂದಿದೀನಿ; ಅವೆಲ್ಲ ನಿಂಗೆ ಕೊಡ್ಬೇಕು. ಬೇಂದ್ರೆ ಅಜ್ಜನ ಪದ್ಯದ ಸಾಲೊಂದು ನೆನಪಾಯ್ತು; 'ಮಲ್ಲಿಗೀ ಮಂಟಪದಾಗ ಗಲ್ಲ-ಗಲ್ಲ ಹಚ್ಚಿ ಕೂತು ಮೆಲ್ಲದನೀಲೆ ಹಾಡೂನಂತ'. ನಿನ್ ಜೊತೆ ಬಹಳಷ್ಟು ಮಾತಾಡೋದಿದೆ. ತುಂಬ ಹುಡುಕಾಡಿಸಬೇಡ; ಬೇಗ ಸಿಕ್ಬಿಡು.

ನಿನ್ನ ನೋಡಲೆಂತೋ,
ಮಾತನಾಡಲೆಂತೋ,
ಮನಸ ಕೇಳಲೆಂತೋ,
ಪ್ರೀತಿ ಹೇಳಲೆಂತೋ,

ಆಹಾ ಒಂಥರಾ ಥರಾ,
ಹೇಳಲೊಂಥರಾ ಥರಾ,
ಕೇಳಲೊಂಥರಾ ಥರಾ...

ನಿನ್ನದೇ ನಿರೀಕ್ಷೆಯಲ್ಲಿರುವ,
- ನಿನ್ನವ

ವಿ. ಸೂ.: ಬ್ಲಾಗಲ್ಲಿ ಏನಾದರೂ ಬರೀಬೇಕು, ಏನು ಬರೀಲಿ ಅಂತ ಯೋಚಿಸ್ತಿದ್ದಾಗ ಹೀಗೇ ಒಂದು ತರ್ಲೆ ಐಡಿಯಾ ಹೊಳೀತು; ಮುಂದೆ ನನ್ನ ಮದ್ವೆ ಆಗಲಿರೋ ಕಲ್ಪನಾ ಕನ್ಯೆಗೆ ಒಂದು ಪತ್ರ ಬರೆದರೆ ಹೇಗೆ ಅಂತ. ಅದ್ಕೋಸ್ಕರ ಈ ಲೇಖನವೇ ಹೊರತು, ನಾನೇನೂ ನಿಜವಾಗಿಯೂ ಅಷ್ಟೊಂದು ಡೆಸ್ಪರೇಟ್ ಆಗಿ ಹುಡುಗಿ ಹುಡುಕ್ತಾ ಇಲ್ಲ :)

ಹಾಂ! ಪ್ರತಿಕ್ರಿಯೆಗೆ ಕನ್ನಡ ಲಿಪಿ ಉಪಯೋಗಿಸಿದರೆ ತುಂಬ ಸಂತೋಷ. ಕನ್ನಡದಲ್ಲಿ ಸರಳವಾಗಿ, ಶೀಘ್ರವಾಗಿ, ತಪ್ಪಿಲ್ಲದಂತೆ ಟೈಪಿಸಲು ನೀವು ಕ್ವಿಲ್‌ಪ್ಯಾಡ್ (
http://www.quillpad.com/kannada/editor.html) ಬಳಸಬಹುದು. ಧನ್ಯವಾದಗಳು :)

'