Tuesday, August 25, 2009

ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಬಿಡಬೇಕೆನಿಸುತ್ತಿದೆಯಾ?

ಕೆಲವು ಸಲ ಹಾಗನ್ನಿಸುವುದು ಸಹಜ.

ಮತ್ತೊಬ್ಬರು ನಮ್ಮ ಸಹನೆ ಪರೀಕ್ಷಿಸುವ ಮಟ್ಟಿಗೆ ನಮ್ಮ ಮೇಲೆ ಕೆಸರೆರಚಾಟ ಮಾಡುವದು, ನಮ್ಮ ಚಾರಿತ್ರ್ಯವಧೆಗೆ ಕೈ ಹಾಕುವುದು, ತೀರಾ ಅಪರಿಚಿತರೂ ಸಹ ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು,... ಆಗೆಲ್ಲ, "ಛೇ! ಇಂಥವರೆಲ್ಲ ಇರುವ ಪರಿಸರದ ಸಹವಾಸವೇ ಬೇಡಪ್ಪಾ" ಅಂತಾ ಮೇಲೆದ್ದುಬಿಡಲು ಸಿದ್ಧರಾಗುತ್ತೇವೆ. ಆದರೆ, ಎಲ್ಲಿ ಹೋದರೂ ಅಂಥ ಜನರಿಂದ ತಪ್ಪಿಸಿಕೊಳ್ಳೋಕಾಗಲ್ಲ. ಜೀವನದಲ್ಲಿ ಸುಖ-ದುಖಃ, ಸಿಹಿ-ಕಹಿ, ಬೆಳಕು-ಕತ್ತಲು ಮುಂತಾದವುಗಳೆಲ್ಲ ಎಷ್ಟರಮಟ್ಟಿಗಿನ ಸಾರ್ವಕಾಲಿಕ ಸತ್ಯಗಳೋ, ಜಗತ್ತಿನಲ್ಲಿ ಒಳ್ಳೆಯವರು-ಕೆಟ್ಟವರು ಎರಡೂ ಥರದ ಜನ ಇರ್ತಾರೆ ಅನ್ನೋದೂ ಸಹ ಅಷ್ಟೇ ಸಾರ್ವಕಾಲಿಕ ಸತ್ಯ. ಇಲ್ಲಿರುವ ಕೆಟ್ಟ ಜನರಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದರೆ ಅಲ್ಲಿ ಇನ್ನೊಂದು ಥರದ ಕೆಟ್ಟ ಜನ ಸಿಗ್ತಾರೆ. ಕೆಟ್ಟದು ಇದ್ದಲ್ಲಿಯೇ ಒಳ್ಳೆಯತನದ ಅನುಭೂತಿ ಆಗಲು ಸಾಧ್ಯ, ಅಲ್ಲವೇ? ಎಲ್ಲ ಕಡೆ ಕೆಟ್ಟ ಜನ ಇದ್ದಾರೆ ಅಂತ ಜಗತ್ತನ್ನೇ ತೊರೆದು ಹೋಗುವುದು ಸಾಧ್ಯವೇ?

ಇಷ್ಟೆಲ್ಲಾ ಹೇಳಬೇಕೆಂದು ಅನಿಸಿದ್ದು, ತೀರ ಇತ್ತೀಚೆಗೆ ಬ್ಲಾಗುಲೋಕದಲ್ಲಿ ಆಗುತ್ತಿರುವ ಕೆಲವು ಕೆಟ್ಟ ಬೆಳವಣಿಗೆಗಳಿಂದ ಬೇಸತ್ತು ಕೆಲವು ಜನ ಬ್ಲಾಗುಲೋಕದ ಮಹನೀಯರು ಮತ್ತು ಪ್ರತಿಭಾವಂತ ಸಹೃದಯೀ ಬ್ಲಾಗುಮಿತ್ರರು ಬ್ಲಾಗಿಂಗ್ ಮಾಡುವುದನ್ನೇ ನಿಲ್ಲಿಸುತ್ತಿರುವದನ್ನು ಕಂಡಾಗ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಬ್ಲಾಗುಲೋಕದಲ್ಲೂ ಸಹ ವೈಯಕ್ತಿಕ ದ್ವೇಷ ಸಾಧಿಸುವವರು, ಮತ್ತೊಬ್ಬರಿಗೆ ವಿನಾಃಕಾರಣ ತೊಂದರೆ ಕೊಟ್ಟು ಸಂತಸಪಡುವ ಸ್ಯಾಡಿಸ್ಟ್ ಗಳು, ಮತ್ತೊಬ್ಬರ ಏಳ್ಗೆ ಸಹಿಸಲಾಗದೆ ಕಾಲೆಳೆಯುವ ಮತ್ಸರವಾದಿಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲೂ ಅಂತರ್ಜಾಲದಲ್ಲಿ ಇರುವ ಕೆಲವು ನ್ಯೂನತೆಗಳಿಂದಾಗಿ ಅಂಥವರನ್ನು ದೂರವಿರಿಸುವುದು ತುಂಬಾ ಕಷ್ಟದ ಕೆಲಸ. ಅಂಥವರನ್ನು ಗುರುತಿಸಿ, ಶಿಕ್ಷಿಸುವುದು ಇನ್ನೂ ಕಷ್ಟದ ಕೆಲಸ.

ಹೇಳಿ-ಕೇಳಿ ಅಂತರ್ಜಾಲ ಎಂಬುದು ಎಲ್ಲರಿಗೂ, ಹೆಚ್ಚು ಕಡಿಮೆ ಎಲ್ಲ ರೀತಿಯಿಂದಲೂ ಮುಕ್ತವಾಗಿರುವ ಸ್ಥಾನ. ಅಲ್ಲಿ ನಿರ್ಬಂಧನೆಗಳನ್ನು ಹಾಕುವುದು ಮತ್ತು ಅವುಗಳ ಪಾಲನೆಯಾಗುತ್ತಿದೆಯೇ ಎಂದು ಹದ್ದಿನಕಣ್ಣು ಇಟ್ಟು ಕಾಯುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಉಳಿದೆಲ್ಲ ಕಡೆಗಿಂತ ಇಲ್ಲಿ ವಿಶೇಷವಾಗಿ ಸಾಕ್ಷರ-ದುರ್ಜನರ ಕಾಟ ಸ್ವಲ್ಪ ಜಾಸ್ತೀನೇ ಅನ್ನಬಹುದು. ಹಾಗಂತ ಬ್ಲಾಗಿನಲ್ಲಿ ಬರೆಯುವುದನ್ನೇ ನಿಲ್ಲಿಸಿದರೆ ಹೇಗೆ? "ರೋಡ್ ರೇಜ್ ಜಾಸ್ತಿ, ಅದ್ಕೋಸ್ಕರ ಇನ್ಮುಂದೆ ನಾನು ರಸ್ತೆಯಲ್ಲಿ ಗಾಡಿ ಓಡಿಸಲ್ಲ" ಅನ್ನೋಕಾಗುತ್ತಾ? ಮನೆ ಸುತ್ತ ನಾಯಿಗಳ ಕಾಟ ಜಾಸ್ತಿ ಅಂತ ಮನೆಗೆ ಹೋಗದೇ ಇರೋಕಾಗುತ್ತಾ? ಯಾವುದೋ ಒಂದು ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೋಲ್ಲ, ಅಲ್ವಾ? ಹೀಗೆ, ಕೆಟ್ಟ ಜನ ಬ್ಲಾಗುಲೋಕದಲ್ಲಿ ಜಾಸ್ತಿ ಅಂತ ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಪಲಾಯನವಾದಿಗಳಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನನಗಂತೂ ಗೊತ್ತಾಗುತ್ತಿಲ್ಲ.

ಬ್ಲಾಗಲ್ಲಿ ಬರೆಯೋದು ಬಿಟ್ಟು, ಪುಸ್ತಕದಲ್ಲಿ ಬರೀತೀರಾ? ಪತ್ರಿಕೆಯಲ್ಲಿ ಬರೀತೀರಾ? ಅಲ್ಲಿ ಕಾಲೆಳೆಯುವವರು, ಅವಹೇಳನ ಮಾಡುವವರು, ಅನಾವಶ್ಯಕ ತೊಂದರೆ ಕೊಡುವವರು ಇಲ್ಲವೇ? ಹೀಗೆ ಬರೆಯುವುದನ್ನೇ ನಿಲ್ಲಿಸುವ ಬದಲು, ಸಾಧ್ಯವಾದಷ್ಟು ಗಟ್ಟಿಯಾಗಿ ನಮ್ಮ ಸುತ್ತ ನಾವೇ ಒಂದು ರಕ್ಷಣಾ ಗೋಡೆ ನಿರ್ಮಿಸಿಕೊಂಡು ಬರೆಯುವುದು ಒಳಿತಲ್ಲವೇ? ನಾನು ಬ್ಲಾಗು ಲೋಕಕ್ಕೆ ಕಾಲಿಟ್ಟಿದ್ದು ಸಹ ಕೆಲವು ಬ್ಲಾಗುಗಳ ಬರಹಗಳಿಂದ ಮತ್ತು ಅವುಗಳಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿಯೇ. ನಾವು ಬರೆಯುವುದು ಕೇವಲ ನಮ್ಮ ಆತ್ಮಸಂತೋಷಕ್ಕಾಗಿ ಮಾತ್ರ ಎಂದು ನಮ್ಮಷ್ಟಕ್ಕೆ ನಾವು ಹೇಳಿಕೊಂಡರೂ, ನಮ್ಮ ಬರಹ ಅದನ್ನು ಓದುವ ಎಷ್ಟೋ ಜನರ ಮೇಲೆ ಗಾಢ ಪರಿಣಾಮ ಬೀರಿ ಅವರಲ್ಲೂ ಬರೆಯುವ ಉತ್ಸಾಹವನ್ನು ತಂದು, ಅವರ ಜೀವನದಲ್ಲೂ ಒಂದು ಚಿಕ್ಕ ಬದಲಾವಣೆಯನ್ನು ಉಂಟು ಮಾಡಬಲ್ಲುದು ಅನ್ನೋದನ್ನ ನಾವು ಮರೆಯಬಾರದು, ಅಲ್ಲವೇ?

ದಿನದಿಂದ ದಿನಕ್ಕೆ ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ನಂತಹ ಬ್ಲಾಗ್ ಹೋಸ್ಟ್ ಗಳು ಬ್ಲಾಗಿನಲ್ಲಿ ಹೆಚ್ಚು ಹೆಚ್ಚು ಪ್ರೈವಸೀ ಅಳವಡಿಸುವ ಕೆಲಸ ಮಾಡುತ್ತಿವೆ. ಅವುಗಳನ್ನು ಉಪಯೋಗಿಸಿಕೊಳ್ಳೋಣ. ಉದಾಹರಣೆಗೆ, ಅನಾಮಧೇಯ (ಅನಾನಿಮಸ್) ಕಮೆಂಟುಗಳನ್ನು ಬರೆಯುವುದನ್ನು ನಿರ್ಬಂಧಿಸುವುದು. ಈ ಸೌಲಭ್ಯವಂತೂ ತುಂಬಾ ಹಿಂದಿನಿಂದ ಇದೆ. ಸದ್ಯಕ್ಕೆ ಬ್ಲಾಗುಲೋಕದ ಬಗ್ಗೆ ಇರುವ ಅತಿದೊಡ್ಡ ದೂರು ಅಂದ್ರೆ ಈ ಅನಾಮಧೇಯ ಕಮೆಂಟುಗಳದ್ದು. ನಾನು ನೋಡಿರುವಂತೆ, ಬೇಜವಾಬ್ದಾರಿಯ ಕಮೆಂಟುಗಳನ್ನು ಬರೆಯುವವರು ತುಂಬಾ ಸೋಂಬೇರಿಗಳಾಗಿರುತ್ತಾರೆ. ಅವರಿಗೆ ಒಂದು ಬ್ಲಾಗರ್ ಅಕೌಂಟ್ ಓಪನ್ ಮಾಡಿ ಅದರಿಂದ ಕಮೆಂಟ್ ಮಾಡುವುದೂ ಸಹ ಕಷ್ಟದ ಕೆಲಸ. ಅದಕ್ಕೇ ಅವರು ಅನಾಮಧೇಯ ಕಮೆಂಟುಗಳನ್ನು ಬರೆಯುವುದು. ಅನಾಮಧೇಯ ಕಮೆಂಟುಗಳನ್ನು ನಿರ್ಬಂಧಿಸುವುದರಿಂದ ಅಂಥವರನ್ನು ಸ್ವಲ್ಪಮಟ್ಟಿಗೆ ದೂರ ಇಡಬಹುದು. ಒಂದು ವೇಳೆ ಅವರೊಂದು ಅಕೌಂಟ್ ಓಪನ್ ಮಾಡಿ ಅದರಿಂದ ನಿಂದನಾತ್ಮಕ ಕಮೆಂಟುಗಳನ್ನು ಹಾಕಿದರೆ ಅಂಥವರ ಅಕೌಂಟನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಬಹುದು. ಕಮೆಂಟುಗಳನ್ನು ಮಾಡರೇಟ್ ಮಾಡಿದ ಮೇಲೆ ಬ್ಲಾಗಿನಲ್ಲಿ ಗೋಚರಿಸಲು (ಪಬ್ಲಿಶ್ ಮಾಡಲು) ಬಿಡುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ನಿಂದನಾತ್ಮಕ ಕಮೆಂಟುಗಳನ್ನು ಕನಿಷ್ಟ ಪಕ್ಷ ಮೊದಲ ಹಂತದಲ್ಲೇ ಚಿವುಟಿ ಹಾಕಿದಂತಾಗುತ್ತದೆ.
ಅದೃಷ್ಟವಶಾತ್ ನನ್ನ ಬ್ಲಾಗಿನಲ್ಲಿ ಇದುವರೆಗೂ ಯಾರೂ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಅದ್ಕೋಸ್ಕರ ನಾನು ನನ್ನ ಬ್ಲಾಗಿನಲ್ಲಿ ಬರುವ ಕಮೆಂಟುಗಳನ್ನು ಮಾಡರೇಟ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ಮುಂದೆ ಕಮೆಂಟ್ಸ್ ಮಾಡರೇಟ್ ಮಾಡಿಯೇ ಪಬ್ಲಿಶ್ ಮಾಡ್ತೀನಿ.

ನಿಮ್ಮ ಬ್ಲಾಗಿನಲ್ಲೇನಾದರೂ ನಿಂದನಾತ್ಮಕ ಕಮೆಂಟುಗಳ ಹಾವಳಿಯಿದ್ದರೆ ಈ ಮೊದಲು ಹೇಳಿದ ಎರಡೂ ವಿಧಾನಗಳನ್ನು ಅನುಸರಿಸಿ ನೋಡಿ. ಕೀಳು ಅಭಿರುಚಿಯ ಕಮೆಂಟುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗೆ ನಿಯಂತ್ರಿಸುವುದಂತೂ ಖಂಡಿತಾ ಸಾಧ್ಯ. ಅನವಶ್ಯಕ, ನಿಂದನಾತ್ಮಕ ಕಮೆಂಟುಗಳು ಹುಟ್ಟದಂತೆ ನೋಡಿಕೊಳ್ಳುವುದು ಸ್ವಲ್ಪಮಟ್ಟಿಗೆ ಬ್ಲಾಗಿಗರ ಕೈಯಲ್ಲೇ ಇದೆ. ಯಾವುದೇ ವಿಷಯದ ಬಗ್ಗೆ ಬ್ಲಾಗಿನಲ್ಲಿ ಬರೆಯುವ ಮುಂಚೆ, ನಮ್ಮ ಬರಹ ಯಾರ ಮನಸ್ಸಿಗಾದರೂ ನೋವು ಉಂಟು ಮಾಡಬಲ್ಲುದೇ ಎಂದು ಒಂದ್ಸಲ ಆಲೋಚಿಸುವುದೊಳಿತು. ಮತ್ತೊಬ್ಬರ ಭಾವನೆಗಳನ್ನು ಕೆರಳಿಸುವ, ಮತ್ತೊಬ್ಬರನ್ನು ಅವಹೇಳನ ಮಾಡಿ ನಗಿಸುವ ಬರಹಗಳನ್ನು ಬರೆಯುವುದೂ ತಪ್ಪಲ್ಲವೇ? ಬ್ಲಾಗಿನಲ್ಲಿ ವೈಯಕ್ತಿಕ ವಿಚಾರಗಳನ್ನು ಸಾಧ್ಯವಾದಷ್ಟು ಕಡಿಮೆ ಹಂಚಿಕೊಳ್ಳಿ. ಇದರಿಂದ ಮತ್ತೊಬ್ಬರು ಅನಾವಶ್ಯಕವಾಗಿ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಕಮೆಂಟ್ ಮಾಡುವುದನ್ನು ತಡೆಯಬಹುದು. ಹೀಗೆ ಕೆಲವು ನಮ್ಮದೇ ಆದ ಮತ್ತು ಕೆಲವು ಬ್ಲಾಗಿಂಗ್ ಸೈಟುಗಳು ನೀಡುವ ಅಸ್ತ್ರಗಳನ್ನು ಬಳಸಿಕೊಂಡು ಸಾಧ್ಯವಾದ ಮಟ್ಟಿಗೆ ಬ್ಲಾಗುಲೋಕದಲ್ಲಿನ ದುಷ್ಟರ ನಿಯಂತ್ರಣ ಮಾಡಬಹುದು ಅಂತ ನನ್ನ ಅನಿಸಿಕೆ.

ಅದೆಲ್ಲ ಬಿಟ್ಟು, "ನನ್ನ ಬರಹದ ಬಗ್ಗೆ ಯಾರೋ ಅನಾಮಧೇಯರು ನಿಂದನಾತ್ಮಕವಾಗಿ ಕಮೆಂಟು ಬರೆದಿದ್ದಾರೆ" ಅಂತ ಬರೆಯುವುದನ್ನೇ ನಿಲ್ಲಿಸುವುದು ನಮ್ಮ ಸ್ವಂತಿಕೆಗೆ ಮತ್ತು ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ, ಅಲ್ಲವೇ?

ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ಸ್ವಾಗತ.

ಚಿತ್ರಕೃಪೆ: ಅಂತರ್ಜಾಲ

ನನಗೇ ಗೊತ್ತಿರಲಿಲ್ಲ! ಈ ಲೇಖನವನ್ನು "ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ" ಎಂಬ ತಲೆಬರಹದಡಿಯಲ್ಲಿ ಮೇ ಫ್ಲವರ್ ಮೀಡೀಯ ಹೌಸ್ ನವರು 'ಅವಧಿ' ಬ್ಲಾಗಿನ 'ಬ್ಲಾಗ್ ಮಂಡಲ' ಎಂಬ ವಿಭಾಗದಲ್ಲಿ ಪರಿಚಯಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಜ ಹೇಳಬೇಕೆಂದರೆ, ನನ್ನ ಈ ಲೇಖನಕ್ಕೆ ಸ್ಪೂರ್ತಿಯಾಗಿದ್ದೇ 'ಅವಧಿ' ಬ್ಲಾಗಿನ 'ಜೋಗಿ'ಗೆ ಬುದ್ದಿ ಹೇಳಿ ಎಂಬ ಲೇಖನ. ಜೋಗಿ (ಗಿರೀಶ್ ರಾವ್) ರವರ ಬರಹಗಳನ್ನು ತುಂಬಾ ಇಷ್ಟಪಟ್ಟು ಓದುವವರಲ್ಲಿ ನಾನೂ ಒಬ್ಬ. ಅವರು ಬ್ಲಾಗು ಮುಚ್ಚಿದ ಸಂಗತಿ ನನಗೆ ನೋವಿನ ವಿಷಯವಾಗಿ ಕಾಡಿದ್ದು ನಿಜ. ಈ ಅನವಶ್ಯಕ, ನಿಂದನಾತ್ಮಕ ಕಮೆಂಟುಗಳ ಹಾವಳಿ ನಿಯಂತ್ರಿಸಲು ಬ್ಲಾಗು ಮುಚ್ಚುವ ಬದಲು ಬೇರೆ ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಹುಟ್ಟಿದ್ದೇ ಈ ಲೇಖನ. ಲೇಖನವನ್ನು ವಿಸ್ತ್ರತ ಓದುಗ ಬಳಗಕ್ಕೆ ಪರಿಚಯಿಸಿದ 'ಅವಧಿ' ಗೆ ಕೃತಜ್ಞತೆಗಳು. 'ಅವಧಿ' ಬ್ಲಾಗಿನಲ್ಲಿ ಈ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Monday, August 10, 2009

ಲಾಲ್‌ಬಾಗ್ ಸುಂದರಿಯರು...

'
ಲಾಲ್‌ಬಾಗ್ ಉದ್ಯಾನವನದಲ್ಲಿ ನಡೆಯುತ್ತಿರುವ ಪುಷ್ಪೋತ್ಸವದಲ್ಲಿ ಕಳೆದ ಶನಿವಾರದಂದು ಕಂಡ ಕೆಲವು ಬೆಡಗಿಯರು...

ಹೂವು, ಚೆಲುವೆಲ್ಲಾ ತಂದೆಂದಿತು...





ಹೂವೇ ಹೂವೇ...



"ನೀವು ಬರ್ತೀರಿ ಅಂತ ನಂಗೆ ಎಷ್ಟೊಂದು ಅಲಂಕಾರ ಮಾಡಿದಾರೆ ನೋಡಿ..."


"ನಮ್ದೂ ಫೋಟೋ ತೆಗೀರೀ..."

ನನ್ನ ಚೆಲುವಿಗಾರು ಸಾಟಿ...


"ಏಕೋ ಕಾಣೆ, ನಂಗೆ ನಾಚ್ಕೆ ಆಗುತ್ತೆ..."

"ಕೆಂಪುತೋಟದ ಕಂದಮ್ಮಗಳು ನಾವು..."




ಹೂವಿನ ಬಾಣದಂತೆ...



"ನನ್ನ ಹೆಸರಷ್ಟೇ ಡೈನೋಸಾರ್.. ಮೈತುಂಬಾ ಹೂಗಳೇ... "



ಹೂವೊಂದು, ಬಳಿ ಬಂದು, ಸೋಕಿತು ನನ್ನೆದೆಯಾ...


ಬರೀ ಇಷ್ಟೇನಾ ಅನ್ಬೇಡಿ... ಇನ್ನೂ ತುಂಬಾ ಇವೆ. ಎಲ್ಲಾ ಇಲ್ಲೇ ನೋಡಿಬಿಟ್ರೆ ಹ್ಯಾಗೇ :) ... ಲಾಲ್‌ಬಾಗ್ ಪುಷ್ಪೋತ್ಸವ ಆಗಸ್ಟ್ 15, ಸ್ವಾತಂತ್ರೋತ್ಸವದ ದಿನದವರೆಗೆ ನಡೆಯುತ್ತದೆ. ಒಂದ್ಸಲ ಹೋಗಿ ನೋಡ್ಕೊಂಡು ಬನ್ನಿ.
'
ಪ್ರೀತಿಯಿಂದ,
'

Wednesday, August 5, 2009

ಸಾರೀ ಪುಟ್ಟೀ, ನೆಕ್ಸ್ಟ್ ಟೈಮ್ ಮಿಸ್ ಮಾಡ್ಕೋಳಲ್ಲ...

'


ಇವತ್ತು ರಕ್ಷಾಬಂಧನ; ನನ್ನ ತಂಗಿ ನಾವು ಮೂರು ಜನ ಅಣ್ಣಂದಿರಿಗೆ ರಾಖಿ ಕಟ್ಟಲು ಊರಲ್ಲಿ ನಮ್ಮ ಮನೆ, ಅಂದ್ರೆ ತನ್ನ ತವರು ಮನೆಗೆ ಬಂದಿರ್ತಾಳೆ. ಆದರೆ ನಾನೊಬ್ಬ ನತದೃಷ್ಟ ಅಣ್ಣ ಮಾತ್ರ ಇಲ್ಲಿ ಬೆಂಗಳೂರೆಂಬ ಕರ್ಮಭೂಮಿಯಲ್ಲಿ ಕೆಲಸದ ಬಂಧಿಯಾಗಿ ಕುಳಿತಿದ್ದೇನೆ. "ಅಣ್ಣಾ ಪ್ಲೀಸ್, ಅವತ್ತೊಂದಿನ ಊರಿಗೆ ಬಂದ್ ಹೋಗೋ, ನಿಂಗೂ ರಾಖಿ ಕಟ್ಟತೇನೀ..." ಅಂತ ತಂಗಿ ಒಂದು ವಾರ ಮುಂಚೇನೇ ಕರೆದಿದ್ರೂ, ಹೋಗಬೇಕೆನ್ನೋ ಮಹದಾಸೆ ನಂಗೂ ಇದ್ರೂ ಹೋಗಲಾಗದ ಅಸಹಾಯಕತೆ ನನ್ನದು. ಊರಲ್ಲಿರುವ ನನ್ನಿಬ್ಬರು ಸಹೋದರರೇ ಅದೃಷ್ಟವಂತರು ಅನ್ಸುತ್ತೆ. ಇರುವ ಒಬ್ಬಳು ತಂಗಿ ಕೈಯಿಂದ ರಾಖಿ ಕಟ್ಟಿಸಿಕೊಂಡು, ತಂಗಿಯ ಶುಭಾಶೀರ್ವಾದ ಪಡೆಯುವ ಅವಕಾಶಾನ ನಾನೊಬ್ಬ ಮಾತ್ರ ಮಿಸ್ ಮಾಡ್ಕೋತಿದೀನಿ. ಆದರೆ ತಂಗಿ ಕೋರಿಯರ್ ನಲ್ಲಿ ಕಳಿಸಿದ ರಾಖಿಯನ್ನೇ ಕಣ್ಣಿಗೊತ್ತಿಕೊಂಡು ನಾನೇ ಸ್ವತಃ ಕಟ್ಟಿಕೊಂಡು ಅಷ್ಟಕ್ಕೇ ತೃಪ್ತಿಪಟ್ಟುಕೊಂಡು ಕುಳಿತಿದ್ದೇನೆ. ಸಾರೀ ತಂಗ್ಯವ್ವ, ನಾನು ಈ ವರ್ಷ ನಿನ್ನ ಕೈಯ್ಯಾರೇ ರಾಖಿಯಂತೂ ಕಟ್ಟಿಸ್ಕೊಳ್ಳೋಕಾಗ್ತಿಲ್ಲ. ಆದರೆ ನಿನ್ನ ಶುಭಾಶೀರ್ವಾದ, ಹಾರೈಕೆಗಳು ನನ್ನೊಂದಿಗೆ ಸದಾ ಇರ್ತವೆ ಅಂತ ಭಾವಿಸ್ತೀನಿ.

ಹುಟ್ಟಿದ ಊರು ಬಿಟ್ಟು ಬೆಂಗಳೂರಿನಲ್ಲಿ ಇದ್ದು ಕಳೆದುಕೊಳ್ಳುತ್ತಿರುವ ಸೌಭಾಗ್ಯಗಳಲ್ಲಿ ಇದೂ ಒಂದು. ಊರಲ್ಲಿದ್ದಾಗ ಕಳೆದ ರಕ್ಷಾಬಂಧನದ ದಿನಗಳ ಮೆಲುಕೇ ಈ ದಿನ ನನ್ನ ಸಂಗಾತಿ. ಚಿಕ್ಕವಳಿದ್ದಾಗ ತಂಗಿ, "ನನಗ ಅಂಗಡಿಗೆ ಹೋಗಿ ರಾಖಿ ತರಾಕ ಗೊತ್ತಾಗುದಿಲ್ಲ, ನೀವsss ತಂದು ಕೊಟ್ರ ರಾಖಿ ಕಟ್ಟತೇನಪಾ" ಅಂತ ಮುಗ್ಧವಾಗಿ ಹೇಳಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸ್ತಿದ್ಲು. "ನಾವsss ರಾಖಿ ತಂದು ಕೊಟ್ಟು ಕಟ್ಟಸ್ಕೊಂಡು ನಿನಗ ಗಿಫ್ಟ್ ಕೊಡಬೇಕೇನವಾ, ಹೋಗೋಗ್.." ಅಂತ ನಾವು ಅಣ್ಣಂದಿರು ಅವಳಿಗೆ ಗೋಳು ಹುಯ್ಕೋತಿದ್ವಿ. ರಾಖಿ ಮತ್ತು ಪೇಢಾ ತಂದುಕೊಟ್ಟು, ನಾವು ಮೂರೂ ಜನ ಅಣ್ಣಂದಿರು ಬೆಳಿಗ್ಗೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟುಕೊಂಡು ತಂಗಿ ಕೈಯಲ್ಲಿ ರಾಖಿ ಕಟ್ಟೀಸ್ಕೊಳ್ಳೋಕೆ ಸಾಲಾಗಿ ಮಣೆ ಹಾಕಿಕೊಂಡು ಕೂಡ್ತಿದ್ವಿ. ತಂಗಿ ಬಂದು ನಮ್ಮೆಲ್ಲರ ಹಣೆಗೆ ವಿಭೂತಿ ಪಟ್ಟಿ ಬಳಿದು, ಆರತಿ ತಟ್ಟೆಯಲ್ಲಿನ ಜ್ಯೋತಿಯ ಬಿಸಿಗೆ ವೀಳ್ಯದೆಲೆ ಕಾಯಿಸಿ, ನಮ್ಮ ಹಣೆಗೆ ವೀಳ್ಯದೆಲೆಯ ಕಪ್ಪು-ಕಾಡಿಗೆ ಬೊಟ್ಟು ಹಚ್ಚಿ, ತನ್ನ ಮುದ್ದಾದ ಪುಟ್ಟ-ಪುಟ್ಟ ಕೈಗಳಿಂದ ನಮ್ಮೆಲ್ಲರಿಗೂ ರಾಖಿ ಕಟ್ಟಿ, ಬಾಯಲ್ಲಿ ಪೇಢಾ ಹಾಕಿ, ಸರತಿಯಂತೆ ನಮಗೆ ಆರತಿ ಬೆಳಗುತ್ತಿದ್ದಳು. ಅಪ್ಪ ನಮಗೆ ಮೊದಲೇ ಕೊಟ್ಟಿರುತ್ತಿದ್ದ ಪುಡಿಗಾಸಿನ ಜೊತೆಗೆ ನಾವು ಮಣ್ಣಿನ ಕುಡಿಕೆಯಲ್ಲಿ ಕೂಡಿಟ್ಟಿರುತ್ತಿದ್ದ ಬಿಡಿಗಾಸನ್ನೂ ಸೇರಿಸಿ ಆರತಿ ತಟ್ಟೆಯಲ್ಲಿ ಹಾಕಿ ನಾವೆಲ್ಲ ತಂಗಿಯ ಶುಭಾಶೀರ್ವಾದ ಪಡೀತಿದ್ವಿ. ನಂತರ ತಂಗಿ ಕಟ್ಟಿದ್ದ ರಾಖಿಯನ್ನು ಹೆಮ್ಮೆಯಿಂದ ಪದೇ ಪದೇ ನೋಡಿಕೊಳ್ಳುತ್ತ ಶಾಲೆಯ ಕಡೆ ಹೆಜ್ಜೆ ಹಾಕ್ತಿದ್ವಿ. ನಾವು ಹೋಗುತ್ತಿದ್ದ ಶಾಲೆ ಬರೀ ಗಂಡು ಮಕ್ಕಳ ಶಾಲೆಯಾದ್ದುದರಿಂದ ಶಾಲೆಯಲ್ಲಿ ರಾಖಿ ಕಟ್ಟಲು ಬರುವ ಹುಡುಗಿಯರ ಕಾಟವಾಗಲಿ, ನಾವು ಅವರಿಂದ ತಪ್ಪಿಸಿಕೊಂಡು ಓಡುವ ಪ್ರಸಂಗವಾಗಲಿ ನಮಗೆ ಬರುತ್ತಿರಲಿಲ್ಲ ಬಿಡಿ :) ಸ್ಕೂಲಲ್ಲಿ ಓರಗೆಯ ಗೆಳೆಯರಿಗೆ ನಮ್ಮ ಕೈಯಲ್ಲಿನ ರಾಖಿ ತೋರಿಸಿ "ನಮ್ ತಂಗಿ ಕಟ್ಟಿದ ರಾಖಿ ನೋಡ್ರಲೇ, ಎಷ್ಟ್ ಛಂದ್ ಐತೀ" ಅಂತ ಜಂಭ ಕೊಚ್ಚಿಕೋತಿದ್ವಿ. ರಕ್ಷಾಬಂಧನ ಮುಗಿದು ಮೂರ್ನಾಲ್ಕು ದಿನಗಳು ಕಳೆದು, ರಾಖಿಯಲ್ಲಿನ ಚಿತ್ತಾರದ ಪಕಳೆಗಳು ಒಂದೊಂದಾಗಿ ಕಳಚಿ ಬಿದ್ದು, ಕಡೆಗೆ ದಾರವೊಂದೇ ಉಳಿಯುವವರೆಗೆ ರಾಖಿ ಬಿಚ್ಚುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ನಮಗೆಲ್ಲ ನಮ್ಮ ತಂಗಿಯ ಮೇಲೆ ಮತ್ತು ಅವಳು ಕಟ್ಟಿದ ರಾಖಿಯ ಮೇಲೆ.

ಫೂಲೋಂಕಾ ತಾರೋಂಕಾ ಸಬ್ಕಾ ಕೆಹ್ನಾ ಹೈ,
ಏಕ್ ಹಜಾರೋಂ ಮೇಂ ಮೇರಿ ಬೆಹ್ನಾ ಹೈ,
ಸಾರೀ ಉಮರ್ ಹಮೇ ಸಂಗ್ ರೆಹ್ನಾ ಹೈ...


ಮುಂದೆ ಸ್ಕೂಲು ಮುಗಿದು ಕಾಲೇಜು ಓದಲು ಹುಬ್ಬಳ್ಳಿಯಲ್ಲಿ ಇದ್ದಾಗಲೂ ತಪ್ಪದೇ ಪ್ರತಿ ವರ್ಷ ರಕ್ಷಾಬಂಧನದ ದಿನ ಊರಿಗೆ ಹೋಗಿ ಬರ್ತಿದ್ದೆ. ಮದುವೆಯಾದ ಮೇಲೆ ತಂಗಿಯೂ ಪ್ರತಿ ವರ್ಷ ತಪ್ಪದೇ ರಕ್ಷಾಬಂಧನದ ದಿನ ಊರಿಗೆ ಬರ್ತಾಳೆ. ಉನ್ನತ ವ್ಯಾಸಂಗಕ್ಕಾಗಿ ನಾನು ಬೆಂಗಳೂರಿಗೆ ಬಂದ ಮೇಲೆಯೇ ರಕ್ಷಾಬಂಧನದ ದಿನ ಊರಲ್ಲಿರಲಾಗದ ಹತಭಾಗ್ಯ ನನ್ನದಾಗಲು ಶುರುವಾಯಿತು. ಕೆಲವು ಸಲ ಊರಿಗೆ ಹೋಗಲು ಸಾಧ್ಯವಾಗಿದ್ದರೂ, ಈ ಶುಭದಿನವನ್ನು ಮಿಸ್ ಮಾಡ್ಕೊಂಡಿದ್ದೇ ಹೆಚ್ಚು ಸಲ.

ನನ್ನ ಮುದ್ದು ತಂಗ್ಯವ್ವ, ನಂಗೊತ್ತು, ಇವತ್ತು ಊರಲ್ಲಿ ಉಳಿದ ಇನ್ನಿಬ್ಬರು ಅಣ್ಣಂದಿರಿಗೆ ರಾಖಿ ಕಟ್ಟುವಾಗ ನೀ ನನ್ನನ್ನು ಖಂಡಿತ ಮಿಸ್ ಮಾಡ್ಕೊಂಡಿರ್ತೀಯಾ ಅಂತ. ಸಾರೀ ಪುಟ್ಟೀ, ಬೇಜಾರ್ ಮಾಡ್ಕೊಬೇಡ; ಇದೊಂದು ಸರ್ತಿ ಕ್ಷಮಿಸಿಬಿಡು. ನೀ ಕಳಿಸಿದ ರಾಖಿ ಇವತ್ತು ಬೆಳಿಗ್ಗೇನೇ ನನ್ನ ಕೈ ಸೇರಿದೆ. ನಿನ್ನ ಹೆಸರು ಹೇಳಿಕೊಂಡು ಅದನ್ನ ನನ್ನ ಕೈಗೆ ನಾನೇ ಕಟ್ಕೊಂಡಿದೀನಿ. ಇದೊಂದು ಸರ್ತಿ ನೀನು ಅಲ್ಲಿಂದಲೇ ನಂಗೆ ಶುಭಾಶೀರ್ವಾದ ಮಾಡಿ, "ನಿಂಗೆ ಒಳ್ಳೆಯದಾಗಲಿ ಅಣ್ಣ" ಅಂತ ಹಾರೈಸಿಬಿಡು. ಮುಂದಿನ ಸಲ ನಿನ್ನ ಕೈಯಾರೆ ರಾಖಿ ಕಟ್ಟಿಸ್ಕೊಳ್ಳೋಕೆ ತಪ್ಪದೇ ಊರಿಗೆ ಬರ್ತೀನಿ, ಮಿಸ್ ಮಾಡ್ಕೋಳಲ್ಲ, ಪ್ರಾಮೀಸ್! :)
'

ಚಿತ್ರಕೃಪೆ: ಅಂತರ್ಜಾಲ'