ಸಹೋದ್ಯೋಗಿಗಳಾದ ಮಂಜು ಮತ್ತು ಗಿರೀಶ್ ನನ್ನ ಮತ್ತು ಪರಸ್ಪರ ಒಳ್ಳೆಯ ಸ್ನೇಹಿತರು. ಅವರಿಬ್ಬರೂ ನೆರೆಹೊರೆಯವರಾಗಿರುವುದು ಅವರ ನಡುವಿನ ಬಾಂಧವ್ಯ ಇನ್ನೂ ಹೆಚ್ಚಲು ಸಹಾಯಕವಾಗಿದೆಯೆನ್ನಬಹುದು.
ಇಬ್ಬರೂ ಸೇರಿದರೆ ತಾವು ಮತ್ತು ತಮ್ಮ ಬಾಡಿಗೆ ಮನೆಯ ಜೀವನದ ಬಗ್ಗೆಯೇ ಸಂಭಾಷಣೆ ನಡೆಯುತ್ತೆ. ನಾವೆಲ್ಲರೂ ಸೇರಿ ಕಾಫೀ ಟೈಮ್ ನಲ್ಲಿ ಕುಳಿತು ಹರಟೆ ಹೊಡೆಯುವಾಗಲೂ ಅವರ ಸುದ್ದಿಯದೇ ಮೇಲುಗೈ. "ನಮ್ಮ ಓನರ್ ಹಾಗೆ ಅಂದ", "ಹೀಗೆ ತಕರಾರು ಮಾಡಿದ", ಮುಂತಾದ ಓನರ್ ಬಗೆಗಿನ ಸಾಮಾನ್ಯ ಕಂಪ್ಲೇಂಟ್ ನಿಂದ ಹಿಡಿದು ಅಕ್ಕಪಕ್ಕದವರೊಂದಿಗಿನ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯದ ಬಗ್ಗೆಯೇ ಮಾತುಕತೆ. ಇಬ್ಬರೂ ಅಕ್ಕಪಕ್ಕದವರಾಗಿರುವುದರಿಂದ ಅಲ್ಲಿ ತಮ್ಮಿಬ್ಬರ ಮಧ್ಯದ ಭಿನ್ನಾಭಿಪ್ರಾಯದ ಬಗೆಗೂ ಮಾತುಕತೆ, ನಮ್ಮ ಸಲಹೆ ಕೇಳುವುದು ಮುಂತಾದವು ನಡೆದೇ ಇರುತ್ತವೆ.
ನೆರೆಹೊರೆಯರೂ ಮತ್ತು ಸಹೋದ್ಯೋಗಿಗಳೂ ಆದ ಕಾರಣ ಅವರಿಬ್ಬರೂ ಯಾವಾಗಲೂ ಒಟ್ಟಿಗೆ ಇದ್ದು, ತಮ್ಮಿಬ್ಬರ ಮನೆಗೂ ಸಾಮಾನ್ಯವಾಗಿ ಅವಶ್ಯವಿರುವ ಕೆಲಸವನ್ನು ಅವರು ಒಟ್ಟಿಗೇ ಮಾಡುವದು. ನ್ಯೂಸ್ ಪೇಪರ್ ತರಿಸೋದಿರಲಿ, ಇಬ್ಬರ ಮನೆಯ ಗ್ಯಾಸ್ ಕನೆಕ್ಶನ್ ಪಡೆಯಲಿರಲಿ, ತಮ್ಮ ಮನೆಗಳ ಚಿಕ್ಕ-ಪುಟ್ಟ ಆಲ್ಟರೇಶನ್ ಗಾಗಿ ಮನೆಯ ಓನರ್ ಜೊತೆಗೆ ಜಗಳವಾಡುವುದಿರಲಿ, ಇಂಥ ಎಲ್ಲ ಕೆಲಸಗಳನ್ನು ಅವರು ಒಟ್ಟಿಗೆ ಮಾಡುವದು. ತುಂಬಾ ಹಾಸ್ಯಪ್ರವೃತ್ತಿಯ ಮಂಜು ಇಂಥ ಕೆಲಸ ಕಾರ್ಯದಲ್ಲಿ ಗಿರೀಶನ ಕಾಲೆಳೆಯುವುದು, ಗೋಳು ಹೊಯ್ದುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಾಗಿ ಅಂತ ಕೆಲಸ ಮಾಡಿದಾಗಲೆಲ್ಲ ಅದೊಂದು ಸ್ವಾರಸ್ಯಕರ ಚರ್ಚೆಗೆ ನಾಂದಿಯಾಗಿದ್ದೂ ಉಂಟು.
ಮೊನ್ನೆ ಹೀಗೆಯೇ ಆಯ್ತು. ಇಬ್ಬರೂ ಒಬ್ಬನೇ ಪೇಪರ್ ಏಜೆಂಟ್ ಹತ್ತಿರ ನ್ಯೂಸ್ ಪೇಪರ್ ಹಾಕಿಸಿಕೊಳ್ಳುತ್ತಾರೆ. ಮನೆಗಳು ತೀರಾ ಅಕ್ಕಪಕ್ಕಾದವುಗಳಾಗಿರುವುದರಿಂದ, ಪೇಪರ್ ಹಾಕುವ ಹುಡುಗ ಎರಡೂ ಪೇಪರ್ ಗಳನ್ನು ಒಟ್ಟಿಗೆ ಇಬ್ಬರಲ್ಲಿ ಒಬ್ಬರ ಮನೆಯ ಮುಂದೆ ಎಸೆದು ಹೋಗುವುದು ವಾಡಿಕೆ. ಹೀಗಾಗಿ, ವಾಡಿಕೆಯಂತೆ ಪೇಪರ್ ನವ ಮೊನ್ನೆ ಇಬ್ಬರ ಪೇಪರ್ ನ್ನೂ ಒಟ್ಟಿಗೇ ಎಸೆದು ಹೋಗಿದ್ದಾನೆ. ಮಂಜುರ ಕಸಿನ್ ತಮ್ಮ ಪೇಪರ್ ನ ಎತ್ಕೊಂಡು ಗಿರೀಶ್ ರ ಪೇಪರ್ ನ ಅಲ್ಲೇ ಬಿಟ್ಟು ಒಳಗೆ ಹೋಗಿ ತಮ್ಮ ಕೋಣೆಯಲ್ಲಿ ಪೇಪರ್ ಓದುತ್ತ ಕುಳಿತಿದ್ದಾರೆ. ನಂತರ ಹೊರಗೆ ಬಂದ ಗಿರೀಶ್, ಮನೆಯ ಮುಂದೆ ಒಂದೇ ಪೇಪರ್ ಇರುವುದನ್ನು ನೋಡಿ, ಮಂಜು ತಮ್ಮ ಪೇಪರ್ ನ ಒಳಗೆ ತೆಗೆದುಕೊಂಡು ಹೋಗಿರಬಹುದು, ಇದು ನನ್ನದೇ ಇರಬೇಕು ಅಂತ ಪೇಪರ್ ನ ಅರ್ಧಂಬರ್ಧ ಓದಿ, ಅಲ್ಲೇ ಇಟ್ಟು, ವಾಕಿಂಗ್ ಗೋ ಇನ್ನೇನಕ್ಕೋ ಹೊರಗಡೆ ಹೋಗಿದ್ದಾರೆ. ಮಂಜುಗೆ ತಮ್ಮ ಪಾಲಿನ
ಸ್ವಲ್ಪ ಹೊತ್ತಿನ ನಂತರ ವಾಕ್ ಮುಗಿಸಿ ವಾಪಸ್ ಬಂದ ಗಿರೀಶ್ ಮನೆಯ ಮುಂದಿನ ಪೇಪರ್ ಎತ್ಕೊಳೋಕೆ ನೋಡ್ತಾರೆ, ಅಲ್ಲಿ ಪೇಪರ್ ಇಲ್ವೇ ಇಲ್ಲ!. ಅರೆ, ಈಗ ತಾನೆ ಓದಿ ಇಟ್ಟು ಹೋಗಿದ್ದ ಪೇಪರ್ ಎಲ್ಲಿ ಹೋಯ್ತು ಅಂತ, ಒಳಗೆ ಹೆಂಡತಿಯನ್ನು ಕೇಳಿದ್ರೆ ನಾನು ತಂದಿಲ್ಲ ಅಂದ್ರಂತೆ. ಹಿಂದಿನ ದಿನ, ಪೇಪರ್ ಹಾಕುವ ಏಜೆಂಟ್ ತಿಂಗಳ ವಂತಿಗೆ ಹಣ ಸಂಗ್ರಹಿಸಲು ಬರುವದಿತ್ತು; ಆದರೆ ಯಾವುದೋ ಕಾರಣಕ್ಕೆ ಬಂದಿರಲಿಲ್ಲ. ಅದಕ್ಕೆ ಗಿರೀಶ್ ಗೆ, ಈ ಪೇಪರ್ ನವನು ವಂತಿಗೆ ಹಣ ಕೊಟ್ಟಿಲ್ಲ ಅಂತ ಹಾಕಿದ್ದ ಪೇಪರ್ ನ ವಾಪಸ್ ಎತ್ಕೊಂಡು ಹೋಗಿದ್ದಾನೆ ಅಂತ ಅನುಮಾನ ಶುರುವಾಗಿದೆ!. ತಕ್ಷಣ ಜೇಬಿನಿಂದ ಮೊಬೈಲ್ ತೆಗೆದು ಪೇಪರ್ ಏಜೆಂಟ್ ಗೆ ಫೋನಾಯಿಸಿ "ಏನ್ರೀ ದುಡ್ಡು ಕೊಟ್ಟಿಲ್ಲ ಅಂತ ಹಾಕಿದ್ದ ಪೇಪರ್ ನ ವಾಪಸ್ ತಗೊಂಡು ಹೋಗೋದೆ?" ಅಂತ ಚೆನ್ನಾಗಿ ದಬಾಯಿಸಿದ್ದಾರೆ. ಪಾಪ ಏಜೆಂಟ್, ಫುಲ್ಲ್ ಕನ್ಫ್ಯೂಸ್! "ಇಲ್ಲ ಸರ್, ನಾನು ಪೇಪರ್ ವಾಪಸ್ ತಂದಿಲ್ಲ, ಆದ್ರೆ ನೀವು ದುಡ್ಡು ಕೊಟ್ಟಿಲ್ಲ ಅಂತ ನನಗೇ ನೆನಪಿರಲಿಲ್ಲ, ಇವಾಗ ಬರ್ಲಾ ಸಾರ್, ದುಡ್ಡು ಕೊಡ್ತೀರಾ?" ಅಂತ ಕೇಳಿದ್ದಾನೆ. ಪೇಪರ್ ವಾಪಸ್ ತಗೊಂಡು ಹೋಗಿದ್ದಲ್ದೇ, ದುಡ್ಡು ಕೊಡ್ತೀರಾ ಅಂತ ಬೇರೆ ಕೇಳ್ತಿದಾನಲ್ಲ ಅಂತ ಗಿರೀಶ್ ಮತ್ತಷ್ಟು ಗರಂ ಆಗಿ ಅವ್ನ ಜೊತೆ ವಾದ ಮಾಡಿದ್ದಾರೆ. ಇಷ್ಟೆಲ್ಲಾ ಗಲಾಟೆ ಕೇಳಿ ಗಾಭರಿಯಾಗಿ ಹೊರಗೆ ಓಡಿ ಬಂದ ಮಂಜು ಮತ್ತವರ ಕಸಿನ್, ಏನಾಯ್ತು ಅಂತ ಕೇಳಿ, ಇಲ್ಲ ಮಾರಾಯ್ರೆ ಬೈ ಮಿಸ್ಟೇಕ್ ನಾವೇ ಎರಡೂ ಪೇಪರ್ ಎತ್ತ್ಕೊಂಡಿದ್ದು ಅಂತ ಹೇಳಿದ್ರಂತೆ. ಈಗ ಗಿರೀಶ್ ಸಿಟ್ಟು ಮಂಜು ಮೇಲೆ ವರ್ಗಾವಣೆಯಾಗಿದೆ. "ಏನ್ರೀ? ನಂ ಪೇಪರ್ ನ ನೀವು ತೆಗೆದಿರಿಸಿ ಆಟ ಆಡಿಸ್ತೀರಾ? ನಿಮ್ ಮೇಲೆ ಓನರ್ ಗೆ ಕಂಪ್ಲೇಂಟ್ ಮಾಡ್ಬೇಕಾ, ಹೇಗೆ?" ಅಂತ ನಯವಾಗಿ ದಬಾಯ್ಸಿದಾರೆ.
ಯಥಾಪ್ರಕಾರ ಇಂದು ಬೆಳಿಗ್ಗೆ ಕಾಫೀ ಟೈಮ್ ನಲ್ಲಿ, ಮೊನ್ನೆ ಹೀಗಾಯ್ತು ಅಂತ ಇಬ್ಬರೂ ತಮ್ಮ ತಮ್ಮ ವರ್ಷನ್ ನ ವಿವರಿಸುತ್ತಿದ್ದರೆ, ನಮಗೆಲ್ಲ ಒಳ್ಳೇ ನಗು :)
ಪ್ರೀತಿಯಿಂದ,